ಮಂಗಳೂರು: ನಗರದ ನೆತ್ತರಕೆರೆ ಎಂಬಲ್ಲಿ ಮರ ಮೈಮೇಲೆ ಬಿದ್ದು ಕೈಯನ್ನೇ ಕಳೆದುಕೊಂಡಿರುವ ಬಾಲಕ ಇನ್ನೂ ಚೇತರಿಸಿಕೊಂಡಿಲ್ಲ. ಬಾಲಕ ಇನ್ನೂ ಗಂಭೀರ ಸ್ಥಿತಿಯಲ್ಲೇ ಇದ್ದು ಆತನ ಮನೆಮಂದಿ ಕಣ್ಣೀರಿಡುತ್ತಿದ್ದಾರೆ.ನೆತ್ತರಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಹಸನಬ್ಬ(11) ಎಂಬಾತನೇ ಗಂಭೀರ ರೀತಿಯಲ್ಲಿ ಗಾಯಗೊಂಡಿರುವ ಬಾಲಕ. ಗುರುವಾರ ಮಧ್ಯಾಹ್ನದ ಸಂದರ್ಭ ಹಸನಬ್ಬ ಇತರ ಮಕ್ಕಳ ಜೊತೆ ಶಾಲೆಯ ಜಗಲಿಯಲ್ಲಿ ಕುಳಿತು ಓದುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.
ಶಾಲೆಯ ಪಕ್ಕದಲ್ಲೇ ಇದ್ದ ಬೃಹತ್ ಗಾತ್ರದ ಮರ ಕೆಳಗುರುಳುತ್ತಿದ್ದಂತೆಯೇ ಹಸನಬ್ಬ ಜೊತೆಗಿದ್ದ ಮಕ್ಕಳು ಓಡಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ಮುರಿದು ಬಿದ್ದ ಮರದ ಕೆಳಗೆ ನಾಲ್ವರು ಮಕ್ಕಳು ಸಿಲುಕಿದ್ದು, ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ, ಹಸನಬ್ಬನ ಭುಜದ ಮೇಲೆ ಮರದ ಗೆಲ್ಲು ಅಪ್ಪಳಿಸಿದ ಕಾರಣ ಕೈ ಮುರಿದು ಹೋಗಿದೆ. ಹಸನಬ್ಬನ ತಂದೆ ಅಬ್ದುಲ್ ಲತೀಫ್ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡಿದ್ದು, ಮಗನ ಸ್ಥಿತಿಯನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಹಸನಬ್ಬನನ್ನು ನಗರದ ತೇಜಸ್ವಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆತ ಇನ್ನೂ ಅಪಾಯದಿಂದ ಹೊರಬಂದಿಲ್ಲ ಎಂದು ಹೇಳಿದ್ದಾರೆ.
