ಕೋಲಾರ: ಹುಸಿ ಕೌಟುಂಭಿಕ ದೌರ್ಜನ್ಯ ವ್ಯಾಜ್ಯಕಾರಣ ತೋರಿಸಿ ಗಂಡನನ್ನು ಜೈಲಿಗಟ್ಟಿದ್ದ ಪತ್ನಿಯ ವಿರುದ್ಧ ಪತಿಯೊಬ್ಬ ಕೋಲಾರ ಜಿಲ್ಲಾ ಪೊಲೀಸ್ ಪ್ರಾಧಿಕಾರಕ್ಕೆ ದೂರು ನೀಡಿದ ಅಪರೂಪದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.ನಗರದ ಶೇಕ್ ತಬ್ರೇಜ್ಪಾಷ ಎಂಬುವವರಿಗೆ 2010ರಲ್ಲಿ ಫರ್ಜಾನಾ ಎಂಬುವವರಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಬಂದವರಿಂದ ಫರ್ಜಾನಾ ರವರಿಗೆ ಈ ಮೊದಲೇ ಇನ್ನೂ ಎರಡು ಮದುವೆಗಳಾಗಿದ್ದವು. ಆದರೆ ಯಾವುದೇ ವಿಚ್ಛೇಧನೆಯನ್ನು ಪಡೆಯದೇ ಮರು ಮದುವೆ ಆಗುತ್ತಿದ್ದಾರೆ ಎಂದು ತಿಳಿದುಬಂದಿತು.
ಗಾಬರಿಯಾದ ತಬ್ರೇಜ್ ಇನ್ನಷ್ಟು ಮಾಹಿತಿಯನ್ನು ಕ್ರೋಢೀಕರಿಸಿದಾಗ ಬೆಸ್ತು ಬಿದ್ದನು. ಫರ್ಜಾನಾಗೆ ಒಂದು ಹೆಣ್ಣು ಮಗುವೂ ಇದೆ. ಈಕೆ ಮದುವೆಯಾಗುವುದು, ಆನಂತರ ಗಂಡನನ್ನು ವರದಕ್ಷಿಣೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ದೊಡ್ಡಮೊತ್ತದ ಹಣವನ್ನು ವಸೂಲಿ ಮಾಡಿ, ನಂತರ ಇನ್ನೊಂದು ಮದುವೆಯಾಗುವುದು ಮಾಡುತ್ತಾಳೆ. ಈಗಾಗಲೇ ಇಬ್ಬರಿಂದ ಹಣ ವಸೂಲಿಯಾಗಿದೆ ಎಂದು ತಿಳಿದುಬಂದಿತು.ಇದರಿಂದ ತಬ್ರೇಜ್ ಗಾಬರಿಯಾಗಿ, ಫರ್ಜಾನಾ ರವರ ತಾಯಿ ಎತ್ತಿಕೊಂಡಿದ್ದ ಹೆಣ್ಣುಮಗುವಿನ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ಗಲಾಟೆಯಾಗಿ ತಬ್ರೇಜ್, ಹಾಗೂ ಅವರ ಮನೆಯವರಿಗೆ ಫರ್ಜಾನಾ ಕಡೆಯವರು ಶಾದಿ ಮಹಲ್ನಲ್ಲಿಯೇ ಹೊಡೆದರು. ಮುಖಭಂಗವಾದ ತಬ್ರೇಜ್ ಮದುವೆಯಾಗದೇ ಅರ್ಧದಲ್ಲಿಯೇ ಮನೆಗೆ ಹಿಂತಿರುಗಿದರು.
ಆದರೆ ಸಂಜೆ ದೊಡ್ಡ ಗುಂಪಿನೊಂದಿಗೆ ತಬ್ರೇಜ್ ಮನೆಗೆ ಬಂದು ಕುಳಿತ ಫರ್ಜಾನಾ, ತನ್ನ ಮದುವೆ ನಿಂತು ಹೋಗಿರುವುದರಿಂದ, ತನ್ನ ಜೀವನ ಹಾಳಾಗಿದೆ. ತನಗಿನ್ನೂ ಚಿಕ್ಕ ವಯಸ್ಸು, ಇನ್ನು ಮುಂದೆ ತನ್ನನ್ನು ಯಾರು ಮದುವೆಯಾಗುತ್ತಾರೆ. ಇದಕ್ಕಾಗಿ ತನಗೆ ಹತ್ತು ಲಕ್ಷ ರೂಪಾಯಿ ಪರಿಹಾರ ಕಟ್ಟಿಕೊಡಿ ಎಂದು ಪಟ್ಟುಹಿಡಿದರು. ಇದೇ ಸರಿ ಸಂದರ್ಭ ಎಂದು ಭಾವಿಸಿ ತಬ್ರೇಜ್ಗೆ ಸೇರಿದ ಕಠಾರಿಪಾಳ್ಯದಲ್ಲಿನ ಮನೆಯನ್ನು ಫರ್ಜಾನಾ ತಮ್ಮ ಕಬ್ಜಾಗೆ ತೆಗೆದುಕೊಂಡರು. ನಮಗೆ ಹತ್ತು ಲಕ್ಷ ರೂಪಾಯಿ ಕೊಟ್ಟ ನಂತರ ಮನೆ ಬಿಟ್ಟುಕೊಡುತ್ತೇನೆ ಎಂದು ತಾಕೀತು ಮಾಡಿದರು. ಆದರೆ 2012 ವರೆಗೂ ಪರ್ಜಾನಾ ತಾನೇ ಬೇರೆಯವರಿಗೆ ಬಾಡಿಗೆಗೆ ನೀಡಿ ಬಾಡಿಗೆ ಹಣ ಪಡೆಯುತ್ತಿದ್ದರು.
ಇದನ್ನು ತಬ್ರೇಜ್ ಆಕ್ಷೇಪಿಸಿದ್ದಕ್ಕೆ ಫರ್ಜಾನಾ ತಾನು ಕರ್ನಾಟಕ ಟಿಪ್ಪು ಸುಲ್ತಾನ್ ಸೆಕ್ಯುಲಾರ್ ಸೇನೆಯ ಮಹಿಳಾ ರಾಜ್ಯಾಧ್ಯಕ್ಷೆ, ತಲೆಹರಟೆ ಮಾಡಿದರೆ, ಬೀದಿಯಲ್ಲಿ ಬಟ್ಟೆ ಬಿಚ್ಚಿ ಓಡಾಡಿಸಿ ಒಡೆಸುತ್ತೇನೆ ಎಂದು ಬೆದರಿಸಿದರು. ಈ ಸಂದರ್ಭದಲ್ಲಿ ಪರ್ಜಾನಾ ಕಡೆಯ ರೌಡಿಗಳು ತಬ್ರೇಜ್ ತಲೆಗೆ ದೊಣ್ಣೆಯಿಂದ ಹೊಡೆದರು, ತಬ್ರೇಜ್ ತಮ್ಮ ಪರ್ವೀಜ್ ಬೆನ್ನಿಗೆ ಚಾಕುವಿನಿಂದ ಇರಿದರು.
ಆದರೆ ಇವರ ಕಿರಿಚಾಟಗಳಿಗೆ ಮನೆ ಮುಂದೆ ಜನರ ದೊಡ್ಡ ಗುಂಪೇ ನೆರೆದಿದ್ದರಿಂದ ಫರ್ಜಾನಾ ಮತ್ತವರ ಗುಂಪು ಸ್ಥಳದಿಂದ ಪರಾರಿಯಾಯಿತು. ರಕ್ತಗಾಯಗಳಾಗಿದ್ದ ತಬ್ರೇಜ್, ಫರ್ವೀಜ್ ರವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದರು. ಆದರೆ ಇದನ್ನು ತಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೋಗಿದ್ದಾರೆಂದು ಭಾವಿಸಿದ ಫಾರ್ಜಾನಾರವರ ತಾಯಿ ಶಾಹಿನಾರವರು ತಾವೇ ಮುಂಚಿತವಾಗಿ ಪೊಲೀಸರಿಗೆ ದೂರು ನೀಡಿ, ಗರ್ಭಿಣಿಯಾಗಿದ್ದ ಪರ್ಜಾನಾರವರ ಹೊಟ್ಟೆಗೆ ತಬ್ರೇಜ್ ಕಾಲಿನಿಂದ ಒದ್ದು ಗರ್ಭಪಾತವನ್ನುಂಟು ಮಾಡಿದ್ದಾನೆ, ಮಗು ಸತ್ತಿದೆ ಎಂದು ಪ್ರಕರಣ ದಾಖಲಿಸಿದರು. ಹೀಗಾಗಿ 2012ರಿಂದ ತಬ್ರೇಜ್, ಅವರ ತಮ್ಮ, ತಾಯಿ ಜಾಮೀನು ಪಡೆದುಕೊಂಡು ಕೋರ್ಟಿಗೆ ವಿಚಾರಣೆಗೆ ಹಾಜರಾಗಬೇಕಾಯಿತು. ಈ ನಡುವೆ ಪರ್ಜಾನಾ ಜೀವನಾಂಶವನ್ನೂ ಕೋರಿ ಪ್ರಕರಣವನ್ನು ದಾಖಲಿಸಿದ್ದು, ಈ ಸಂಬಂಧ ತಬ್ರೇಜ್ ಜೈಲಿಗೂ ಹೋಗಿ ಬಂದರು.
ಕಳೆದ 6 ವರ್ಷ ಕಾಲದಿಂದ ಒಂದಲ್ಲಾ ಒಂದು ಹುಸಿ ಕೇಸುಗಳ ಆರೋಪಗಳ ಮೇರೆಗೆ ತಬ್ರೇಜ್ ಹಾಗೂ ಅವರ ಮನೆಯವರು ಕೋರ್ಟಿಗೆ, ಪೊಲೀಸ್ ಠಾಣೆಗೆ ಅಂಡಲೆಯುವಂತಾಯಿತು. ಇದರಿಂದ ತೀವ್ರವಾಗಿ ಬೇಸತ್ತ ತಬ್ರೇಜ್ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು. ಕೊನೆಗೆ ಬೇಸತ್ತ ತಬ್ರೇಜ್ ಹಾಗೂ ಅವರ ಮನೆಯವರು ಫರ್ಜಾನಾ ರವರ ವಿರುದ್ಧ ಕೋಲಾರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಿದರು.ಫರ್ಜಾನಾ ಮೊದಲು ಮದುವೆಯಾಗಿದ್ದರು. ಆದರೆ ವಿವಾಹ ವಿಚ್ಛೇಧನೆ ಪಡೆಯದೇ ಮರುವಿವಾಹವಾಗಿದ್ದಾರೆ. ಹೀಗಾಗಿ ದ್ವಿಪತಿತ್ವ ಅಪರಾಧ ಎಸಗಿದ್ದಾರೆ. ನನ್ನೊಡನೆ ವಿವಾಹ ಪೂರ್ಣಗೊಂಡಿಲ್ಲ. ನನ್ನೊಡನೆ ಯಾವತ್ತೂ ಸಂಸಾರ ಮಾಡಿಲ್ಲ. ಆದರೆ ವರದಕ್ಷಿಣೆ ಹುಸಿ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾರೆ. ನನ್ನೊಡನೆ ಪರ್ಜಾನಾ ಯಾವತ್ತೂ ಧೈಹಿಕ ಸಂಬಂಧ ಹೊಂದಿಲ್ಲ. ಆದರೆ ಆಕೆ ತಾನು ಗರ್ಭಿಣಿಯಾಗಿದ್ದೇನೆ ಎಂದು ಸುಳ್ಳು ತಿಳಿಸಿದ್ದಾರೆ. ನನ್ನ ಮನೆಯನ್ನು 2010ರಿಂದ ಕಬ್ಜಾ ಮಾಡಿ ಬಾಡಿಗೆ ವಸೂಲಿ ಮಾಡಿಕೊಳ್ಳುತ್ತಿದ್ದಾರೆ. ವಂಚಿಸಿ ನನ್ನೊಡನೆ ವಿವಾಹವಾಗಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ತಬ್ರೇಜ್ ತಮ್ಮ ಫರ್ವೀಜ್, ತಾಯಿ ಶಂಷುದುನ್ನೀಸಾ ಹಾಜರಿದ್ದರು. ದೂರನ್ನು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ರೆವಿನ್ಯೂ ಹೆಡ್ ಮುನ್ಷಿ ಮುನಿವೆಂಕಟಪ್ಪ ಸ್ವೀಕರಿಸಿದರು.
