ಶ್ರೀನಿವಾಸಪುರ: ಪಟ್ಟಣದ ಹಲವು ಕಡೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ 15ವ್ಯಕ್ತಿಗಳನ್ನು ಪತ್ತೆಹಚ್ಚಿ ದಂಡ ವಿಧಿಸಿತು.ತಾಲ್ಲೂಕು ಕಚೇರಿ ಆವರಣ, ಎಂಜಿ ರಸ್ತೆ ಮತ್ತಿತರ ಕೆಲವು ಕಡೆಗಳಲ್ಲಿ ಪೊಲೀಸರ ನೆರವಿನಿಂದ ಧೂಮಪಾನಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಯಿತು.

ಮಿನಿ ವಿಧಾನ ಸೌಧದ ಮುಂದೆ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳನ್ನು ಹಿಡಿದು ದಂಡ ವಿಧಿಸಲು ಮುಂದಾದ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಿಕ್ಕಿಬಿದ್ದ ಕೆಲವು ಧೂಮಪಾನಿಗಳು ವಾಗ್ವಾದ ನಡೆಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ದಂಡ ವಿಧಿಸಲು ನೆರವಾದರು. ದಂಡ ವಿಧಿಸಿದ್ದು ಮಾತ್ರವಲ್ಲದೆ, ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧ ಎಂಬ ವಿಷಯವನ್ನು ಮನದಟ್ಟು ಮಾಡಿಕೊಡಲಾಯಿತು.
ಆರೋಗ್ಯ ಇಲಾಖೆಯ ಆರೊಗ್ಯ ನಿರೀಕ್ಷಕರಾದ ಸುಬ್ರಮಣಿ, ವಿಶ್ವನಾಥಾಚಾರಿ, ನವೀನ್ ಕುಮಾರ್, ಮಂಜುನಾಥ್, ಅನಿಲ್ ಹಾಗೂ ಪೊಲೀಸ್ ಪೇದೆ ರೆಡ್ಡಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
