ಕೋಲಾರ : ಕೋಲಾರ ಮತ್ತು ಚಿಕ್ಕಬಳ್ಳಾಪುರ ನೀರಾವರಿ ಹೋರಟ ಸಮಿತಿ ಹಾಗೂ ಕನ್ನಡ, ರೈತ, ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ಮತ್ತು ಎಲ್ಲಾ ಪ್ರಗತಿಪರ ಸಂಘಟನೆಗಳು ಒಟ್ಟಾಗಿ ಸೇರಿ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮೇಕೆದಾಟು ಯೋಜನೆಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯನ್ನು ಸೇರಿಸಬೇಕೆಂದು ಒತ್ತಾಯಿಸಿದರು.
ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ನೀರಿಗಾಗಿ ಪರಿತಪಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅನೇಕ ಹೋರಾಟಗಳನ್ನು ಮಾಡಿ ಸರ್ಕಾರದ ಗಮನ ಸೆಳೆದರೂ ಕೂಡ ಈ ಜಿಲ್ಲೆಗಳಿಗೆ ಇದುವರೆಗೂ 1 ಟಿ.ಎಂ.ಸಿ. ಕೂಡ ನೀರು ಬಂದಿಲ್ಲ. ಇತ್ತೀಚೆಗೆ ಸರ್ಕಾರದ ಅವೈಜ್ಞಾನಿಕ ಕೆ.ಸಿ.ವ್ಯಾಲಿ / ಹೆಚ್.ಎನ್.ವ್ಯಾಲಿಯಿಂದ ಬರುವ ಕಲುಷಿತ ನೀರು ಎಲ್ಲಾ ತಾಲ್ಲೂಕುಗಳಿಗೂ ತಲುಪುವುದಿಲ್ಲ. ಅಲ್ಪಸ್ವಲ್ಪ ಕಲುಷಿತ ಈ ನೀರು ಈ ಜಿಲ್ಲೆಗಳ ಜನ ಮತ್ತು ಜಾನುವಾರು ಹಾಗೂ ವ್ಯವಸಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ ಕಾರಣ ಈ ಯೋಜನೆಯನ್ನು ಪುನರ್ ಪರಿಶೀಲಿಸಿ ಒಳ್ಳೆಯ ಯೋಜನೆ ತರುವ ಅವಶ್ಯಕತೆ ಇದೆ. ಈ ಜಿಲ್ಲೆಗಳಿಂದ ರಾಜ್ಯಕ್ಕೆ ಚಿನ್ನ, ರೇಷ್ಮೆ, ಹಾಲು ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಒದಗಿಸುತ್ತಿದ್ದರೂ ಸಹ ಸರ್ಕಾರ ಈ ಭಾಗಕ್ಕೆ ಶುದ್ಧವಾದ ನೀರನ್ನು ಕೊಡುವಲ್ಲಿ ವಿಫಲವಾಗಿದೆ.

ಆದ್ದರಿಂದ ಸರ್ಕಾರ ಇತ್ತೀಚೆಗೆ ಮೇಕೆದಾಟು ಯೋಜನೆ ಮಾಡಲು ಚಿಂತಿಸುತ್ತಿದ್ದು, ಕೇಂದ್ರ ಸರ್ಕಾರದ ಸಿ.ಡಬ್ಲ್ಯೂಸಿ (ಅeಟಿಣಡಿಚಿಟ Wಚಿಣeಡಿ ಅommissioಟಿ) ಇದಕ್ಕೆ ಹಸಿರು ನಿಶಾನೆ ತೋರಿಸಿದೆ. ಮತ್ತು ಡಿಪಿಆರ್. ನೀಡಲು ಕರ್ನಾಟಕ ಸರ್ಕಾರಕ್ಕೆ ತಿಳಿಸಿದೆ. ಈ ಮೇಕೆದಾಟು ಯೋಜನೆಯಿಂದ ಸುಮಾರು 66 ಟಿಎಂಸಿ ನೀರು ಸಂಗ್ರಹವಾಗುವ ಸಾಧ್ಯತೆಯಿದ್ದು. ಈ ಯೋಜನೆಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಹರಿಸಬೇಕೆಂದು ಈ ಪತ್ರಿಕಾಗೋಷ್ಠಿ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ.
ನೀರಾವರಿ ಹೋರಾಟದ ಮುಖಂಡ ಕುರುಬರಪೇಟೆ ವೆಂಕಟೇಶ್, ಕರ್ನಾಟಕ ಅಹಿಂದ ರಕ್ಷಣಾ ವೇದಿಕೆಯ ರಾಜ್ಯಾದ್ಯಕ್ಷ ಅಹಿಂದ ಮಂಜುನಾಥ್, ಕ.ರವೇ ಮೇಡಿಹಾಳ ರಾಘವೇಂದ್ರ, ಜಯ ಕರ್ನಾಟಕ ಕೆ.ಆರ್.ತ್ಯಾಗರಾಜ್ ಮಳ್ಳೂರು ಹರೀಶ್, ರೈತ ಸಂಘದ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ನಾಗದೇನಹಳ್ಳಿ ನಾರಾಯಣಸ್ವಾಮಿ, ಪ್ರವೀಣ್, ರವಿ, ಮುತ್ತುರಾಜ್, ಮುರಳಿ, ಕಾರ್ತಿಕ್, ಅನಿಲ್, ನಾಗರಾಜ್ ಮುಂತಾದವರು ಭಾಗವಹಿಸಿದ್ದರು.
