ಶ್ರೀನಿವಾಸಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಯಲ್ದೂರು ವಲಯದ ಮುತಕಪಲ್ಲಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಬಷೀರ್ ರವರು ಉದ್ಘಾಟಿಸಿ ಮಾತನಾಡಿ, ಗಿಡ-ಮರ ಬಳ್ಳಿಗಳು ಪರಿಸರಕ್ಕೆ ಆಧಾರ ಸ್ತಂಭವಾಗಿದ್ದು, ಮನುಷ್ಯನ ಮೂಲ ಕ್ರಿಯೆ ಉಸಿರಾಟ ಹಾಗೂ ಆಹಾರ ಪದಾರ್ಥವಾಗಿ ಬಳಕೆಯಾಗುತ್ತಿದೆ. ಪ್ರಸ್ತುತ ಪರಿಸರ ಮಾಲಿನ್ಯದಿಂದ ಇವುಗಳ ಮೇಲೆ ತೀವ್ರ ಹಾನಿಯಾಗಿದ್ದು, ಇವಗಳನ್ನು ರಕ್ಷಿಸಬೇಕಾದ ಅವಶ್ಯಕತೆ ಇದೆಯೆಂದು ಅಭಿಪ್ರಾಯಟ್ಟರು.
ವಲಯ ಮೇಲ್ವಿಚಾರಕ ನಾಗರಾಜ್ ಭಂಡಾರಿ ಮಾತನಾಡಿ, ಪೂರ್ವಿಕರು ಬೆಳೆಸಿದ ಮತ್ತು ಉಳಿಸಿದ ಪರಿಸರದ ಪರಿಣಾಮದಿಂದ ಇಂದು ನಾವು ಆರೋಗ್ಯಯುತವಾಗಿ ಬದುಕುತ್ತಿದ್ದೇವೆ. ಇಂದು ನಾವು ಪರಿಸರವನ್ನು ರಕ್ಷಿಸದೇ ಇದ್ದರೆ ಮುಂದಿನ ಪೀಳಿಗೆ ವಿನಾಶದ ಅಂಚನ್ನು ತಲಪಬೇಕಾಗುತ್ತದೆ ಮಹಾತ್ಮಗಾಂದೀಜಿಯವರು ಹೇಳಿರುವಂತೆ ಪ್ರಕೃತಿ ಮನುಷ್ಯನ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ. ಪ್ರಸ್ತುತ ಮನುಷ್ಯನಿಗೆ ಬೇಕಾದ ಆಹಾರ, ನೀರು, ಗಾಳಿ ಭೂಮಿಯ ಮೇಲ್ಪದರಲ್ಲೇ ಸಿಗುತ್ತಿದೆ ಆದರೆ, ಅನಾವಶ್ಯಕವಾದ ಮತ್ತು ವಿಷಪೂರಿತ ಪೆಟ್ರೋಲಿಯಂ ಮತ್ತು ಖನಿಜ ಪದಾರ್ಥಗಳು ಭೂಮಿ ಒಡಲೊಳಗಿದ್ದು, ಅವುಗಳನ್ನು ಪಡೆಯಲು ಮನುಷ್ಯರು ಪರಿಸರ ಮಾಲಿನ್ಯ ಮಾಡಿ, ಸಮತೋಲವನ್ನು ಹಾಳು ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಪ್ರತಿಯೊಬ್ಬರೂ ವರ್ಷಕ್ಕೆ ತಲಾ 10 ರಂತೆ ಗಿಡಗಳನ್ನು ಬೆಳೆಸಿದರೂ ಮುಂದಿನ ಭವಿಷ್ಯಕ್ಕೆ ಪರಿಸರ ಉಳಿಸುವ ಕಾರ್ಯಕ್ರಮ ಸಫಲವಾಗುವುದು. ಆದ್ದರಿಂದ ಪ್ರತಿ ಮನೆ ಹಾಗೂ ಪ್ರತಿ ಶಾಲೆ ಪರಿಸರರಕ್ಷಣೆಯ ಕೇಂದ್ರಗಳಾಗಬೇಕು ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಲಾ ರೀತಿಯ ತರಬೇತಿ ಮತ್ತು ಸಹಕಾರವನ್ನು ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹಸೇನ್, ಕಾಲೇಜಿನ ಎಲ್ಲಾ ಉಪನ್ಯಾಸಕರು, ಸೇವಾ ಪ್ರತಿನಿಧಿಗಳಾದ ಲಾವಣ್ಯ, ಗೀತಾ ಮತ್ತು ಬೀಬಿಪಾತಿಮಾ ಇತರರು ಉಪಸ್ಥಿತರಿದ್ದರು.

