ಬಂಟ್ವಾಳ: ಬಿ. ಮೂಡ ಗ್ರಾಮದ ಮೊಡಂಕಾಪು ರಾಜೀವ ಪಲ್ಕೆಯ ನಿವಾಸಿ, ಶಂಭೂರಿನ ಎ.ಎಂ.ಆರ್. ಸಂಸ್ಥೆಯಿಂದ ಪಲ್ಲಮಜಲು ಗ್ರಿಡ್ಗೆ ವಿದ್ಯುತ್ ಸರಬರಾಜು ಮಾಡುವ ಹೆಚ್.ಟಿ. ಟೆನ್ಷನ್ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಕೃಷ್ಣ ಕುಲಾಲ್ ಅವರ ನಿವಾಸಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಮೃತರ ಕುಟುಂಬದ ದುಃಖದಲ್ಲಿ ಭಾಗಿಯಾದ ಶಾಸಕರು, ಈ ದುರ್ಘಟನೆ ಅತ್ಯಂತ ನೋವುಂಟು ಮಾಡಿದ್ದು, ಕೃಷ್ಣ ಕುಲಾಲ್ ಅವರ ಅಕಾಲಿಕ ನಿಧನವು ಕುಟುಂಬಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಸಂತಾಪ ಸೂಚಿಸಿದರು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದು,
ಈ ಮೃತರ ವಾರಸುದಾರರಿಗೆ ಕನಿಷ್ಠ ರೂ.5 ಲಕ್ಷ ಪರಿಹಾರವನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಸಂಸ್ಥೆಗೆ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಮೃತರ ಪುತ್ರ ವಸಂತ್ ಅವರಿಗೆ ಧೈರ್ಯ ತುಂಬಿದ ಅವರು, ಕುಟುಂಬದೊಂದಿಗೆ ಸದಾ ನಾವಿರುವುದಾಗಿಯು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭಾ ಸದಸ್ಯ ಸುರೇಶ್ ಟೈಲರ್,ಪ್ರಮುಖರಾದ ಕೇಶವ ದೈಪಲ, ವಾಣಿ ಕೇಶವ ದೈಪಲ, ಉಮೇಶ್ ಕಾಮಾಜೆ, ಚಂದಪ್ಪ, ಭೋಜ ಸಾಲ್ಯಾನ್, ಗಿರೀಶ್, ಪ್ರಣಾಮ್ ಅಜ್ಜಿಬೆಟ್ಟು, ಶ್ರಾವಣ್ ಸಹಿತ ಸ್ಥಳೀಯರು ಉಪಸ್ಥಿತರಿದ್ದರು.
