“ವಂದೇ ಮಾತರಂ ಕೇವಲ ಗೀತೆಯಲ್ಲ, ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆ ಹೊತ್ತಿಸಿದ ಘೋಷಣೆ”
ಬಂಟ್ವಾಳ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚೈತನ್ಯವಾದ ‘ವಂದೇ ಮಾತರಮ್’ ಗೀತೆಯ 150ನೇ ವಾರ್ಷಿಕೋತ್ಸವವನ್ನು ರಾಷ್ಟ್ರವ್ಯಾಪಿ ಆಚರಿಸಲು ಪ್ರಧಾನಿನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸಿದೆ.

ವಂದೇ ಮಾತರಮ್ ಕೇವಲ ಗೀತೆಯಲ್ಲ, ಅದು ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಭಾರತಮಾತೆಯನ್ನು ದೇವತೆಯಾಗಿ ಆರಾಧಿಸಲು ಮತ್ತು ದಾಸ್ಯದಿಂದ ಮುಕ್ತಿ ಪಡೆಯಲು ಭಾರತೀಯರಲ್ಲಿ ದೇಶಭಕ್ತಿಯ ಜ್ವಾಲೆ ಹೊತ್ತಿಸಲು ಬರೆದ ಶಕ್ತಿಯುತ ಘೋಷವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಲಾಯಿತು.
ಸಮಿತಿಯ ವತಿಯಿಂದ ದ.ಕ.ಜಿಲ್ಲೆಯ ಬಂಟ್ವಾಳದ ಗೋಳ್ತಮಜಲು ಶ್ರೀ ಗಣೇಶ ಮಂದಿರ, ಸಜೀಪ ಶಾರದಾನಗರ ಶ್ರೀ ಶಾರದಾಂಬ ಭಜನಾ ಮಂದಿರ, ಪುತ್ತೂರಿನ ಬೊಳುವಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶ್ರೀ ಮಹಾಮ್ಮಾಯಿ ಭಜನಾ ಮಂದಿರ ಪಿಲ್ಯ,ಬೆಳ್ತಂಗಡಿಯಲ್ಲಿ ಈ ಗೀತೆಯ ಮಹತ್ವವನ್ನು ತಿಳಿಸಿ, ಸಾಮೂಹಿಕವಾಗಿ ‘ವಂದೇ ಮಾತರಮ್’ ಗೀತೆಯನ್ನು ಹಾಡಲಾಯಿತು.
ಸ್ವತಂತ್ರ ಸಂಗ್ರಾಮದ ಕಾರ್ಯವನ್ನು ಮಹರ್ಷಿ ಅರಬಿಂದೋರವರು ಇದನ್ನು ಕೇವಲ ರಾಜಕೀಯ ಕಾರ್ಯವಲ್ಲ, ಬದಲಿಗೆ ಜನರ ಆತ್ಮಚೇತನವನ್ನು ಜಾಗೃತಗೊಳಿಸುವ ಆಧ್ಯಾತ್ಮಿಕ ಕ್ರಿಯೆ ಎಂದು ಪರಿಗಣಿಸಿದ್ದರು.
1905ರ ಬಂಗಾಳ ವಿಭಜನೆ ವಿರೋಧ ಚಳುವಳಿಯ ಮುಖ್ಯವಾಹಿನಿಯಾಗಿದ್ದ ಈ ವಂದೇ ಮಾತರಂ ಘೋಷವು, ಬ್ರಿಟಿಷ್ ದಬ್ಬಾಳಿಕೆಯನ್ನು ಎದುರಿಸಲು ಮತ್ತು ಏಕತೆಯನ್ನು ಸಾರಲು ಸಾಧನವಾಗಿತ್ತು. ಕರ್ನಾಟಕದ ಗುಲ್ಬರ್ಗಾ (ಕಲಬುರಗಿ) ಯಲ್ಲಿ ವಂದೇ ಮಾತರಮ್ ಚಳುವಳಿ ನಡೆದಿತ್ತು. ಈ ವಿದ್ಯಾರ್ಥಿ ನೇತೃತ್ವದ ಚಳುವಳಿಯ ಮೂಲಕ ಇದು ನಮ್ಮ ರಾಜ್ಯದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಅಪಾರ ಕೊಡುಗೆ ನೀಡಿದೆ ಎಂದು ಸಮಿತಿತಿಳಿಸಿದೆ.



