ಬಂಟ್ವಾಳ: ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ನ 8 ನೇ ವರ್ಷದ ವಾರ್ಷಿಕೋತ್ಸವ

ಬಂಟ್ವಾಳ : ಕಡೇಶಿವಾಲಯ ಗ್ರಾಮದ ಪೆರ್ಲಾಪು ಸರಕಾರಿ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್(ರಿ.) ಇದರ 8 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪದಗ್ರಹಣ -2025 ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಕ್ಕಳಿಗೆ ಸಂಸ್ಕಾರ ಮನೆಯಿಂದಲೇ ಪ್ರಾರಂಭವಾಗಬೇಕು. ಉತ್ತಮ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿಯನ್ನು ಕಲಿಸುವ ಅಗತ್ಯತೆ ಇದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಗೌರವಾಧ್ಯಕ್ಷರಾದ ಮೋಹನ್ ಕುಮಾರ್ ವಹಿಸಿದ್ದರು.
ಬೆಳಿಗ್ಗೆ ಪುರೋಹಿತ ಅರುಣ್ ಶಾಂತಿ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಪೂಜಾ ಕಾರ್ಯಕ್ರಮ ನಡೆಯಿತು. ಬಳಿಕ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಶಿಕ್ಷಕಿ ಸಂಧ್ಯಾ ವಿದ್ಯಾಧರ್ ಪೂಜಾರಿ ನಿರ್ದೇಶನದಲ್ಲಿ ಕೋಟಿ ಚೆನ್ನಯ ನೃತ್ಯ ರೂಪಕ ಗಮನಸೆಲೆಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮಿನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಜಿಪ ಮುನ್ನೂರು ಮುರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಕೆ ಸಂಜೀವ ಪೂಜಾರಿ, ಇಸ್ರೋ ಬೆಂಗಳೂರು ಇದರ ಟೆಕ್ನಿಕಲ್ ಆಫೀಸರ್ ಶರತ್ ಕುಮಾರ್ ಕಂಪದಕೋಡಿ, ಗ್ರಾಮ ಲೆಕ್ಕಾಧಿಕಾರಿಯಾದ ಕೃತಿಕಾ ಕೊರತಿಗಿರಿ, ಅರಣ್ಯ ಇಲಾಖೆಯ ಗಸ್ತು ಅರಣ್ಯಪಾಲಕ ಹೇಮಂತ್ ಕುಮಾರ್ ಪಿ ರವರುಗಳನ್ನು ಅಭಿನಂದಿಸಲಾಯಿತು.

ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಟ್ರಸ್ಟ್ ವತಿಯಿಂದ ದತ್ತು ಪಡೆದ ವಿದ್ಯಾರ್ಥಿ ಆತ್ಮಿಕಾ, ಹಾಗೂ ಮುಕ್ತಿ ದಾಮದಲ್ಲಿ ಕೈತೋಟ ರಚಿಸಲು ಲೋಕಯ್ಯ ಪಿ ರವರಿಗೆ ಸಹಾಯಧನದ ಚೆಕ್ ಹಸ್ತಾಂತರಿಸಲಾಯಿತು
ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್(ರಿ.) ಕಡೇಶಿವಾಲಯದ ಇದರ ನೂತನ ಅಧ್ಯಕ್ಷ ಯಶವಂತ್ ಸಾಲ್ಯಾನ್ ಪತ್ತುಕೊಡಂಗೆ ನೇತೃತ್ವದ ತಂಡಕ್ಕೆ ಅಧಿಕಾರ ಹಸ್ತಾಂತರ ಹಾಗೂ ಪದಗ್ರಹಣ ಜರಗಿತು. ವೇದಿಕೆಯಲ್ಲಿ ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರು ಸ್ಥಾಪಕ ಅಧ್ಯಕ್ಷರಾದ ಲೋಕೇಶ್ ಕೋಡಿಕೆರೆ, ಯುವವಾಹಿನಿ (ರಿ.)ಉಪ್ಪಿನಂಗಡಿ ಘಟಕದ ಮಹಿಳಾ ಸಂಘಟನಾ ನಿರ್ದೇಶಕಿ ವನಿತ ಕೃಷ್ಣಪ್ಪ ಪೂಜಾರಿ,ಮೊದಲಾದವರು ಉಪಸ್ಥಿತರಿದ್ದರು. ಟ್ರಸ್ಟ್ ನ ಅಧ್ಯಕ್ಷ ವಿದ್ಯಾದರ ಪೂಜಾರಿ ಪ್ರಸ್ತಾವನೆಗೈದು, ಸ್ವಾಗತಿಸಿದರು, ಸಂಧ್ಯಾ ವಿದ್ಯಾದರ, ಕಾವ್ಯ ಉಮೇಶ್, ಕೀರ್ತಿ, ಸನ್ಮಾನ ಪತ್ರ ವಾಚಿಸಿದರು, ಟ್ರಸ್ಟಿನ ಪ್ರಧಾನ ಸಂಚಾಲಕ ದಿನೇಶ್ ಪೂಜಾರಿ ಸುರ್ಲಾಜೆ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.