ಕೆತ್ತಿಕಲ್ ಗುಡ್ಡ ಕುಸಿತ ಪ್ರದೇಶಕ್ಕೆ ಡಿವೈಎಫ್ಐ ನಾಯಕರ ನಿಯೋಗ ಭೇಟಿ
ಗುರುಪುರ : ಮಂಗಳೂರು-ಸೋಲಾಪುರ ರಾಷ್ಟಿçÃಯ ಹೆದ್ದಾರಿ ೧೬೯ರ ಚತುಷ್ಪಥ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಗುಡ್ಡದ ಮಣ್ಣು ಅಗೆದಿರುವುದರಿಂದ ಕೆತ್ತಿಕಲ್ ಗುಡ್ಡ ಕುಸಿದಿದ್ದರೂ, ಸೂಕ್ತ ಜೀವನ-ವಾಸ್ತವ್ಯದ ಭದ್ರತೆ ಒದಗಿಸದೆ ಏಕಾಏಕಿಯಾಗಿ ಗುಡ್ಡದ ಮೇಲ್ಭಾಗದಲ್ಲಿರುವ ಅಮೃತನಗರದ ೧೨ ಕುಟುಂಬಗಳ ಮನೆ ಖಾಲಿ ಮಾಡಿ, ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿದು ಹಾಕಿರುವ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆ ಕ್ರಮ ಖಂಡನೀಯ ಎಂದು ಡಿವೈಎಫ್ಐ ಹೇಳಿದೆ.

ಕೆತ್ತಿಕಲ್ ಗುಡ್ಡ ಕುಸಿತದ ಭೀತಿಗೆ ಒಳಗಾಗಿರುವ ಪ್ರದೇಶಕ್ಕೆ ಆ. ೯ರಂದು ಭೇಟಿ ನೀಡಿದ ಡಿವೈಎಫ್ಐ ನಾಯಕರ ನಿಯೋಗವು ಸ್ಥಳೀಯ ಸಂತ್ರಸ್ತರ ಸಮಸ್ಯೆ ಆಲಿಸಿ ಪ್ರದೇಶದ ಪರಿಶೀಲನೆ ನಡೆಸಿತು. ಅವೈಜ್ಞಾನಿಕವಾಗಿ ಮಣ್ಣು ತೆರವುಗೊಳಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿಫಲವಾಗಿರುವ ಜಿಲ್ಲಾಡಳಿತ, ಸೂಕ್ತ ಪರಿಹಾರ ನೀಡದೆ ಅಮೃತನಗರದ ನಿವಾಸಿಗರು ಬೀದಿಪಾಲಾಗುವಂತೆ ಮಾಡಿದೆ. ಗುರುಪುರದಲ್ಲಿ ಹೊಸ ಸೇತುವೆ ನಿರ್ಮಾಣದ ವೇಳೆಯೇ ಇಲ್ಲಿಂದ ಅಕ್ರಮವಾಗಿ ಸಾವಿರಾರು ಲೋಡ್ ಮಣ್ಣು ಸಾಗಿಸಲಾಗಿದೆ. ಜಿಲ್ಲಾಡಳಿತ ಸಹಿತ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವಿಷಯ ಗೊತ್ತಿದ್ದರೂ ಪ್ರಭಾವಿಗಳ ಪರವಾಗಿ ಕೆಲಸ ಮಾಡಿವೆ ಎಂದು ಡಿವೈಎಫ್ಐ ಆರೋಪಿಸಿದೆ.
ಗುಡ್ಡ ಕುಸಿತದಿಂದ ಕೆತ್ತಿಕಲ್ ಗುಡ್ಡದ ಸ್ಥಿತಿ ವಯನಾಡ್ನಂತೆ ಭೀತಿ ಹುಟ್ಟಿಸುವಂತಿದೆ. ಮಣ್ಣು ಗಣಿಗಾರಿಕೆ ವಿಷಯದಲ್ಲಿ ಸರ್ಕಾರಿ ಇಲಾಖಾ ಮಟ್ಟದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಕೆತ್ತಿಕಲ್ನ ಇಂದಿನ ಪರಿಸ್ಥಿತಿ ಹಾಗೂ ಅಮೃತನಗರ ನಿವಾಸಿಗರ ಅತಂತ್ರ ಸ್ಥಿತಿಗೆ ಈ ಕ್ಷೇತ್ರದ ಜನಪ್ರತಿನಿಧಿಗಳು ಜವಾಬ್ದಾರರಾಗುತ್ತಾರೆ ಎಂದು ನಿಯೋಗ ದೂರಿದೆ.
ಸಂತ್ರಸ್ತರಿಗೆ ಯಾವುದೇ ರೀತಿಯ ಭದ್ರತೆ ನೀಡದೆ `ಇದು ತಾತ್ಕಲಿಕವಾಗಿ ಸ್ಥಳಾಂತರ’ ಎಂದಿರುವ ಜಿಲ್ಲಾಡಳಿತ ಮತ್ತು ಮನಪಾ ಆಡಳಿತವು, ಸಂತ್ರಸ್ತರ ಮನೆಯ ನೀರು ಮತ್ತು ವಿದ್ಯುತ್ ಸಂಪರ್ಕ ಕಡಿದು ಹಾಕಿ, ಅವರನ್ನು ಶಾಶ್ವತವಾಗಿ ಎತ್ತಂಗಡಿ ಮಾಡುವ ಹುನ್ನಾರ ನಡೆಸಿದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದರು.
ನಿಯೋಗದೊಂದಿಗೆ ಹಲವು ಸಂತ್ರಸ್ತರು ತಮ್ಮ ದುಃಖ ನಿವೇದಿಸಿಕೊಂಡಿದ್ದಾರೆ. ಸ್ವಂತ ಮನೆ ಕಳೆದುಕೊಂಡು ಬೀದಿಗೆ ಬಂದಿರುವ ಸಂತ್ರಸ್ತರಿಗೆ ಶಾಶ್ವತ ಪರಿಹಾರದವರೆಗೆ ಜಿಲ್ಲಾಡಳಿತ, ತಿಂಗಳ ಬಾಡಿಗೆ ಮೊತ್ತ ನೀಡಬೇಕು. ಮನೆ ಕಳೆದುಕೊಳ್ಳಬಹುದಾದ ಭೀತಿಯಲ್ಲಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ಸೂಕ್ತ ಭರವಸೆಯೊಂದಿಗೆ ಪರಿಹಾರ ಒದಗಿಸಬೇಕು. ಜೊತೆಗೆ ಕೆತ್ತಿಕಲ್ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲಾದ ಪ್ರಕರಣದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದವರು ಆಗ್ರಹಿಸಿದರು.
ಡಿವೈಎಫ್ಐ ನಿಯೋಗದಲ್ಲಿ ಸಂತೋಷ್ ಬಜಾಲ್ ಜೊತೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ವಾಮಂಜೂರು ಪ್ರದೇಶ ಅಧ್ಯಕ್ಷ ದಿನೇಶ್ ಬೊಂಡAತಿಲ, ಕಾರ್ಯದರ್ಶಿ ಚಂದ್ರಹಾಸ ತಾರಿಗುಡ್ಡೆ, ಸ್ಥಳೀಯ ಮುಖಂಡರಾದ ಹೊನ್ನಯ್ಯ ಅಂಚನ್ ಸಂಕೇಶಬೆಟ್ಟು, ಕೀರ್ತನ್ ಸಂಕೇಶಬೆಟ್ಟು, ಜಿತೇಶ್ ದೇವಸಬೆಟ್ಟು ಉಪಸ್ಥಿತರಿದ್ದರು.