“ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ
ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ “ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆಯು ಭಾನುವಾರ ಮುಂಜಾನೆ ನಡೆಯಿತು.
ಬೆಳಗ್ಗಿನ ಜಾವ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ, ಬಿ.ಸಿ.ರೋಡಿನ ಕೈಕಂಬದಲ್ಲಿರುವ ಪೊಳಲಿ ದ್ವಾರ ಹಾಗೂ ಗುರುಪುರ ಕೈಕಂಬ ಪೊಳಲಿ ದ್ವಾರದಿಂದ ಏಕಕಾಲದಲ್ಲಿ ಪಾದಯಾತ್ರೆ ಹೊರಟು ಪೊಳಲಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ವಿ.ಹಿಂ.ಪ.ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ,ವಿ.ಹಿಂ.ಪ. ಹಾಗೂ ಭಜರಂಗದಳದ ಪ್ರಮುಖರಾದ ರಘ ಸಕಲೇಶಪುರ, ಡಾ.ಕೃಷ್ಣಪ್ರಸನ್ನ,ಭರತ್ ಕುಮ್ಡೇಲ್,ಗುರುರಾಜ್ ಬಂಟ್ವಾಳ,ಸಂತೋಷ್ ಸರಪಾಡಿ,ಶಿವಪ್ರಸಾದ್ ತುಂಬೆ,ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಸಹಿತ ನೂರಾರು ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು, ಭಕ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪೊಳಲಿ ಕ್ಷೇತ್ರದಲ್ಲಿ ವಸ್ತ್ರ ಸಂಹಿತೆ ಕ್ರಮಬದ್ಧವಾಗಿ ಜಾರಿಗೊಳಿಸಬೇಕು, ಕ್ಷೇತ್ರದ ವತಿಯಿಂದ ಗೋಶಾಲೆ ನಿರ್ಮಾಣಗೊಳ್ಳಬೇಕು, ಹಿಂದೂ ಸಮಾಜಕ್ಕೆ ಧಾರ್ಮಿಕ ಶಿಕ್ಷಣದ ಅಗತ್ಯತೆ ಇರುವುದರಿಂದ ಬಾಲ ಸಂಸ್ಕಾರ ಕೇಂದ್ರದಂತಹ ಧಾರ್ಮಿಕ ಶಿಕ್ಷಣ ಕೇಂದ್ರ ಸ್ಥಾಪನೆ ಮಾಡಬೇಕು, ಬಡ ಹಿಂದೂ ಕುಟುಂಬಗಳಿಗೆ ನೆರವಾಗುವಂತೆ ಸಾಮೂಹಿಕ ಮದುವೆ ಕಾರ್ಯಕ್ರಮ ನಡೆಯಬೇಕು ಎಂದು ಆಗ್ರಹಿಸಿ ಪೊಳಲಿ ಶ್ರೀರಾಜರಾಜೇಶ್ವರಿ ದೇವಳದ ಆಡಳಿತ ಸಮಿತಿಗೆ ಮನವಿಯನ್ನು ಸಲ್ಲಿಸಲಾಯಿತು.
ದೇವಳದ ಪರವಾಗಿ ನಾಗೇಶ್ ರಾವ್ ಮನವಿಯನ್ನು ಸ್ವೀಕರಿಸಿದರು.