ವಿವಿಧ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಅಖಿಲ ಭಾರತೀಯ ಅಧಿವಕ್ತ ಪರಿಷತ್ ನಿಂದ ತಹಶೀಲ್ದಾರರಿಗೆ ಮನವಿ
ಬಂಟ್ವಾಳ: ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕಡತಗಳ ಶೀಘ್ರ ವಿಲೇವಾರಿಗೆ ಕ್ರಮ ಕೈ ಗೊಳ್ಳಬೇಕು ,ಪ್ರತಿ ಗ್ರಾಮಕ್ಕೊಂದು ಗ್ರಾಮಕಾರಣಿಕರನ್ನು ನೇಮಕಗೊಳಿಸಿ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು,ನಮೂನೆ 9 ಮತ್ತು 11 ಅದ ಬಗ್ಗೆ ಪಹಣಿಯಲ್ಲಿ ನಮೂದು ಮಾಡಿ ಅಕ್ರಮಗಳ ತಡೆಗೆ ಸೂಕ್ತ ಕ್ರಮ ಕೈ ಗೊಳ್ಳಬೇಕು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಬಂಟ್ವಾಳ ಘಟಕದ ವತಿಯಿಂದ ಶನಿವಾರ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಪ್ರಸಾದ್ ಕುಮಾರ್ ರೈ ಯವರು ಬಂಟ್ವಾಳ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ತಹಶೀಲ್ದಾರ್ ಅವರ ಗಮನಸೆಳೆದರು.ಬಂಟ್ವಾಳ ತಾಲೂಕು ಕಚೇರಿಯ ಅಭಿಲೇಖಾಲಯದ ಅವ್ಯವಸ್ಥೆಯನ್ನು ಸರಿಪಡಿಸಬೇಕು ,ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಪೇಕ್ಷಿತ ನಕ್ಷೆಯ ಮುಖಾಂತರ ಭೂ ಪರಿವರ್ತನೆಗೆ ಅವಕಾಶ ಮಾಡಿಕೊಡಬೇಕು,ಸಣ್ಣ, ಪುಟ್ಟ ಸಮಸ್ಯೆಗಳ ವಿಲೇವಾರಿಗೆ ತಿಂಗಳಿಗೊಂದು ರೆವೆನ್ಯೂ ಅದಾಲತ್ ಗಳನ್ನ ನಡೆಸಿ ಸ್ಥಳದಲ್ಲೇ ಪರಿಹಾರ ನೀಡಬೇಕು,ಅಕ್ರಮ ಸಕ್ರಮಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರಕ್ಕೆ ಶೀಘ್ರ ಕ್ರಮ ಕೈ ಗೊಳ್ಳಬೇಕು ಹಾಗೂ
ಕೋರ್ಟ್ ಡಿಕ್ರಿಯ ಆಧಾರದಲ್ಲಿ ಪಹಣಿಯಲ್ಲಿ ಹಕ್ಕುದಾರರ ಹೆಸರನ್ನು ನಮೂದು ಮಾಡಲು ಇರುವ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈ ಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಅಧಿವಕ್ತ ಪರಿಷತ್, ಬಂಟ್ವಾಳ ಘಟಕದ ಉಪಾಧ್ಯಕ್ಷ ಯಶವಂತ ವಿಟ್ಲ, ಪ್ರಧಾನ ಕಾರ್ಯದರ್ಶಿ ಶ್ರೀರಾಮ್ ಪ್ರಭು, ವಕೀಲರಾದ ವೀರೇಂದ್ರ ಎಂ. ಸಿದ್ದಕಟ್ಟೆ, ವಿನೋದ್, ಶ್ರೀಕೃಷ್ಣ, ಗಂಗಾಧರ ನಾಯಕ್ ಉಪಸ್ಥಿತರಿದ್ದರು.
ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ತಹಶೀಲ್ದಾರ್ ಅರ್ಚನಾ ಭಟ್ ಸಾರ್ವಜನಿಕರಿಗೆ ಅನುಕೂಲವಾಗುವ ಮತ್ತು ಜನಸಾಮಾನ್ಯರಿಗೆ ಅಧಿಕಾರಿಗಳು ಸ್ಪಂದನೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.