ಬಂಟ್ವಾಳ: ಯಕ್ಷಕಾವ್ಯ ತರಂಗಿಣಿ ದರ್ಬೆ ಮತ್ತು ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ ಇದರ ಜಂಟಿ ಆಶ್ರಯದಲ್ಲಿ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ ‘ಬಣ್ಣಗಾರಿಕೆ ಶಿಬಿರ’ವು ನೇರಂಬೋಳು ಸಭಾಭವನದಲ್ಲಿ ನಡೆಯಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಸಂಘಟಕ ಮತ್ತು ಕಲಾವಿದರಾದ ಅಶೋಕ ಶೆಟ್ಟಿ ಸರಪಾಡಿ ಇವರು ಶಿಬಿರವನ್ನು ಉದ್ಘಾಟಿಸಿ, ಯಕ್ಷಕಾವ್ಯ ತರಂಗಿಣಿ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಯಕ್ಷಗಾನದ ಮಹತ್ವವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಸಾಧನ ಕಲಾವಿದ ಪ್ರಭಾಕರ ಶೆಟ್ಟಿ ತೆಂಕಕಾರಂದೂರು ಅವರನ್ನು ಸನ್ಮಾನಿಸಲಾಯಿತು. ಬಣ್ಣಗಾರಿಕೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ಮಕ್ಕಳಿಗೆ ಬಣ್ಣ ಹೇಗೆ ಹಚ್ಚುವುದು ಮತ್ತು ಯಕ್ಷಗಾನದಲ್ಲಿ ಬಣ್ಣದ ಪಾತ್ರ ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದರು.
ಸಂಜೀವ ಕಜೆಪದವು ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ರವಿ ನೇರಂಬೋಳು ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಯಕ್ಷಕಾವ್ಯ ತರಂಗಿಣಿ ದರ್ಬೆ ಮತ್ತು ಶ್ರೀ ನಾಗಬ್ರಹ್ಮ ಮಹಮ್ಮಾಯಿ ತಂಡ ಮಂಗಳೂರು ಇಲ್ಲಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲಾ ಮಕ್ಕಳಿಗೂ ಯಕ್ಷಗಾನಕ್ಕೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
