ನಂದನಹಿತ್ಲು ದೈವಸ್ಥಾನಕ್ಕೆ ಕೊಡಿಮರ ಸಮರ್ಪಣೆ ಪೂರ್ವಭಾವಿ ಸಭೆ, ದೈವನರ್ತಕ ಶೇಖರ ಪಂಬದಗೆ ಸನ್ಮಾನ
ಬಂಟ್ವಾಳ: ನಂದನಹಿತ್ಲು ಶ್ರೀ ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನಕ್ಕೆ ನೂತನ ಧ್ವಜಸ್ತಂಭ (ಕೊಡಿಮರ) ಸಮರ್ಪಣೆಯ ಕುರಿತು ಪೂರ್ವಭಾವಿ ಸಭೆ ಹಾಗೂ ದೈವನರ್ತಕ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ ಪಂಬದ ಸಜೀಪ ಅವರಿಗೆ ಅಭಿನಂದನಾ ಕಾರ್ಯಕ್ರಮ ದೈವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು.

ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ದೈವ ಇಚ್ಚೆ ಮತ್ತು ದೈವ ನುಡಿಯಂತೆ ದೈವಸ್ಥಾನದ ಸಮೀಪವೇ ಧ್ವಜಸ್ತಂಭಕ್ಕೆ ಸೂಕ್ತವಾದ ಮರ ದೊರೆತಿದೆ. ಸಂಬಂಧಪಟ್ಟವರ ಜೊತೆ ಮಾತುಕತೆಯು ನಡೆಸಲಾಗಿದ್ದು, ದೈವಸ್ಥಾನಕ್ಕೆ ಮರ ಒದಗಿಸಲು ಒಪ್ಪಿಗೆಯನ್ನು ನೀಡಿದ್ದಾರೆ ಇದನ್ನು ಕ್ಷೇತ್ರಕ್ಕೆ ತರುವ ನಿಟ್ಟಿನಲ್ಲಿ ತಂತ್ರಿಯವರ ಮೂಲಕ ವೈಧಿಕ ವಿಧಿವಿಧಾನ ಕ್ಕಾಗಿ ಶೀಘ್ರವೇ ದಿನ ನಿಗದಿಪಡಿಸಲಾಗುವುದು 2024 ರ ಎಪ್ರಿಲ್ ಮೊದಲ ವಾರದಲ್ಲಿ ನಡೆಯುವ ಕ್ಷೇತ್ರದ ವಾರ್ಷಿಕ ಜಾತ್ರೆಗೆ ಮುನ್ನ ಧ್ವಜಸ್ತಂಭ ಸಮರ್ಪಣಾ ಕಾರ್ಯ ನಡೆಸಲಾಗುವುದು ಎಂದರು.

ಬಾಳಿಗಾ ಮನೆತನದ ಬಿ. ಸುಧೀರ್ ಬಾಳಿಗಾ ಅವರು ಮಾತನಾಡಿ, ಸ್ಥಳೀಯರಾದ ಕಾಮತ್ ಎಂಬವರು ಕೊಡಿಮರವನ್ನು ದೈವಸ್ಥಾನಕ್ಕೆ ಉಚಿತವಾಗಿ ನೀಡಲಿದ್ದಾರೆ. ಮರವನ್ನು ಕ್ಷೇತ್ರಕ್ಕೆ ತಲುಪಿಸುವ ಮತ್ತು ಮುಂದಿನ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಚರ್ಚಿಸುವುದು ಸೂಕ್ತ ಎಂದರಲ್ಲದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ ಪಂಬದ ಸಹಿತ ಅವರ ಹಿರಿಯರು ಕ್ಷೇತ್ರದಲ್ಲಿ ಮಾಡಿರುವ ಪ್ರಾಮಾಣಿಕ ಸೇವೆಯನ್ನು ಸ್ಮರಿಸಿದರು.
ಯಾವುದೇ ಪ್ರಶಸ್ತಿಗಳು ವ್ಯಕ್ತಿಯ ಸಾಧನೆಗೆ ಹುಡುಕಿ ಬರಬೇಕೇ ವಿನಹ ಸಾಧಕರು ಪ್ರಶಸ್ತಿಯ ಬೆನ್ನತ್ತಬಾರದು ಶೇಖರ ಪಂಬದ ಅವರ ದೈವಕಾರ್ಯದಲ್ಲಿ ಮಾಡಿರುವ ಸಾಧನೆಗೆ ಜಿಲ್ಲಾ ಪ್ರಶಸ್ತಿ ಆರ್ಹವಾಗಿಯೇ ದೊರೆತಿದೆ ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲಿ ಎಂದು ಹಾರೈಸಿದರು.
ಅತಿಥಿಯಾಗಿದ್ದ ಸುಜೀರು ವೈದ್ಯನಾಥ ದೈವಸ್ಥಾನದ ಆಡಳಿತ ಸಮಿತಿ ಸದಸ್ಯ ರವೀಂದ್ರ ಕಂಬಳಿ ಮಾತನಾಡಿ, ಯಾವುದೇ ಕ್ಷೇತ್ರದ ಧ್ವಜಸ್ತಂಭ ಆ ಗ್ರಾಮಕ್ಕೆ ಸುಭಿಕ್ಷೆಯನ್ನು ತರಲಿದೆ. ಈ ನಿಟ್ಟಿನಲ್ಲಿ ಮರ ಕಡಿಯುವುದರಿಂದ ಹಿಡಿದು ಸಮರ್ಪಣೆಯವರೆಗೂ ಅನುಸರಿಸಬೇಕಾದ ಎಲ್ಲಾ ವೈಧಿಕ ಕ್ರಮಗಳನ್ನು ಪೂರೈಸುವಂತೆ ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶೇಖರ ಪಂಬದ ಸಜೀಪ ಅವರು ನಂದನಹಿತ್ಲು ದೈವಸ್ಥಾನದಲ್ಲಿ ತನ್ನ ಹಿರಿಯರು ಕೂಡ ನರ್ತನ ಸೇವೆ ಮಾಡುತ್ತಾ ಬಂದಿದ್ದು, ಪ್ರಸ್ತುತ ತಾನು ಆ ಸೇವೆಯನ್ನು ಮುಂದುವರಿಸುತ್ತಿದ್ದೆನೆ. ದೈವ ಪ್ರೇರಣೆಯಿಂದಲೋ ತನ್ನ ಪ್ರಾಮಾಣಿಕ ಸೇವೆಗೆ ಈ ಪ್ರಶಸ್ತಿ ಲಭಿಸಿದ್ದು, ಮುಂದಿನ ದಿನದಲ್ಲೂ ಸೇವೆಯಲ್ಲಿ ಯಾವುದೇ ಚ್ಯುತಿಬಾರದಂತೆ ಕಾರ್ಯನಿರ್ವಹಿಸುವುದಾಗಿ ನುಡಿದರು.
ಬಂಟ್ವಾಳ ಮನೆತನದ ವಿಶ್ವನಾಥ ಪೂಜಾರಿ ಪೊನ್ನಂಗಿಲ ಗುತ್ತು, ಸಂಜೀವ ಪೂಜಾರಿ ಪೆಲತ್ತಿಮಾರು, ಲೋಕೇಶ್ ಬಂಗೇರ ಗಾಣದಪಡ್ಪು, ಲೋಕನಾಥ ಪೂಜಾರಿ ಬಡಕೊಟ್ಟು, ಪ್ರಮುಖರಾದ ತುಂಬೆಗುತ್ತಿನ ಬಾಬುಶೆಟ್ಟಿ, ಶಿವರಾಮ್ ತುಂಬೆ, ಪ್ರವೀಣ್ ಶೆಣೈ, ದಿವಾಕರ ದಾಸಯ್ಯ, ಜಗನ್ನಾಥ ಕೆ.ತುಂಬೆ, ಶಿಲ್ಪಿ ಸದಾಶಿವ ಶೆಣೈ, ವಸಂತಪ್ರಭು, ಅಮ್ಮು ತುಂಬೆ, ದೇವದಾಸಶೆಟ್ಟಿ ಬಂಟ್ವಾಳ, ಸುದರ್ಶನ ಬಜ, ಉಮೇಶ್ ಅರಳ, ಜಯ ಸುವರ್ಣ ಶಿವಪ್ರಸಾದ್ ಕೊಟ್ಟಾರಿ ಮೊದಲಾದವರಿದ್ದರು.
ಪ್ರಕಾಶ್ ಅಂಚನ್ ಸ್ವಾಗತಿಸಿದರು. ವೆಂಕಟೇಶ್ ಬಂಟ್ವಾಳ ಸನ್ಮಾನ ಪತ್ರ ವಾಚಿಸಿದರು.