ಶ್ರೀ ವೆಂಕಟರಮಣಸ್ವಾಮಿ ಸಮೂಹ ವಿದ್ಯಾಸಂಸ್ಥೆಗಳಿಂದ ಶಿಕ್ಷಕ ದಿನಾಚರಣೆ
ಬಂಟ್ವಾಳ: ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಸಮೂಹ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಶಿಕ್ಷಕ ದಿನಾಚರಣೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟ್ವಾಳ ತಾಲ್ಲೂಕು ಸರ್ಕಾರಿ ಪ್ರೌಢಶಾಲೆ ವಗ್ಗ ಇಲ್ಲಿಯ ಮುಖ್ಯಶಿಕ್ಷಕ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶೇಕ್ ಆದಮ್ ಸಾಹೇಬ್ ನೆಲ್ಯಾಡಿ ಮಾತನಾಡಿ ಪೂಜನೀಯ ಮತ್ತು ಪವಿತ್ರ ವೃತ್ತಿಯಾದ ಶಿಕ್ಷಕ ವೃತ್ತಿ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮ ಪಡಿಸುವುದರೊಂದಿಗೆ ಅವರನ್ನು ಸತ್ಪ್ರಜೆಗಳನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇಂತಹ ಮಹತ್ಕಾರ್ಯವು ಒಬ್ಬ ಶ್ರೇಷ್ಠ ಶಿಕ್ಷಕನಿಂದ ಮಾತ್ರ ಸಾಧ್ಯ,ಶ್ರೇಷ್ಠಶಿಕ್ಷಕ ಹೃದಯದಿಂದ ಪಾಠಮಾಡಿದಾಗ ಶೈಕ್ಷಣಿಕ ಕ್ಷೇತ್ರದಲ್ಲಿ ನೈಜವಾದ ಬದಲಾವಣೆ ಸಾಧ್ಯ.ವಿದ್ಯಾರ್ಥಿಗಳ ಮನೋಬಲವನ್ನು ವೃದ್ಧಿಸುವ ಸಾಧನೆಯನ್ನು ಶಿಕ್ಷಕ ಮಾಡಬೇಕು,ಸಂಸ್ಕಾರ ಮೌಲ್ಯಯುತವಾದ ಶಿಕ್ಷಣದ ಜೊತೆಗೆ ಸ್ವಾಭಿಮಾನ ಸ್ವಾವಲಂಬನೆಗೆ ಪೂರಕವಾದ ಶಿಕ್ಷಣವನ್ನು ನಿಡುವುದು ಶಿಕ್ಷಕನಾದವನ ಪರಮ ಕರ್ತವ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಸ್.ವಿ.ಎಸ್. ಸಮೂಹಸಂಸ್ಥೆಗಳ ಆಡಳಿತಾತ್ಮಕ ಪ್ರಾಂಶುಪಾಲರಾದ ಡಾ.ಸುಯೋಗವರ್ಧನ್ ಡಿ.ಎಮ್.ರವರು ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಂತೆ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವದರೊಂದಿಗೆ ತಮ್ಮ ಜೀವನವನ್ನು ಸಫಲಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ವಿ.ಎಸ್. ಸಮೂಹ ಸಂಸ್ಥೆಗಳ ಎಲ್ಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಮುಖ್ಯಅತಿಥಿಗಳು ಬಹುಮಾನವನ್ನು ವಿತರಿಸಿದರು.
ಎಸ್.ವಿ.ಎಸ್. ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಸುಜಾತಾ ಬಿ. ಸ್ವಾಗತಿಸಿ,ಎಸ್.ವಿ.ಎಸ್. ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ. ವಂದಿಸಿದರು.ಪದವಿಕಾಲೇಜಿನ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾಕಾರ್ಯಕ್ರಮದ ಬಳಿಕ ಎಸ್.ವಿ.ಎಸ್. ಸಮೂಹ ಸಂಸ್ಥೆಗಳ ಶಿಕ್ಷಕರು ಉಪನ್ಯಾಸಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆದವು.ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ಆಯೋಜಿಸಿದ್ದು ವಿಶೇಷವಾಗಿತ್ತು.