ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಸಮಾಜದ ಆದರ್ಶವಾಗಿ ಸ್ವೀಕರಿಸಿ: ಶಾಸಕ ನಾಯ್ಕ್
ಬಂಟ್ವಾಳ: ನಾರಾಯಣ ಗುರುಗಳ ಕಾಲದ ಸಾಮಾಜಿಕ ಪರಿಸ್ಥಿತಿಯನ್ನು ಇಂದು ಊಹಿಸುವುದು ಕೂಡ ಅಸಾಧ್ಯದ ಮಾತು. ಆದರೆ ಯಾವುದೇ ಸಂಘರ್ಷವಿಲ್ಲದೆ ಅವರು ಇಡೀ ಸಮಾಜವನ್ನು ಜಾಗೃತಗೊಳಿಸಿದ ಕಾಯಕ ನಮ್ಮೆಲ್ಲರಿಗೂ ಆದರ್ಶವಾಗಬೇಕಿದ್ದು, ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ಇಡೀ ಸಮಾಜದ ಆದರ್ಶವಾಗಿ ಸ್ವೀಕರಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.

ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ಆಡಳಿತಸೌಧದಲ್ಲಿ ಗುರುವಾರ ನಡೆದ 169ನೇ ಬ್ರಹ್ಮಶ್ರೀ ನಾರಾಯಣಗುರು ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗುರುಗಳ ತತ್ವ,ಆದರ್ಶಗಳು, ಸಂಘರ್ಷವಿಲ್ಲದ ಹೋರಾಟ ಮುಂದಿನ ಪೀಳಿಗೆಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಕೇವಲ ನಾಲ್ಕು ಗೋಡೆಗಳ ಮಧ್ಯಕ್ಕೆ ಆಚರಣೆ ಸೀಮಿತಗೊಳಿಸದೆ ಸಮಸ್ತರನ್ನು ಸೇರಿಸಿಕೊಂಡು ಸಾರ್ವಜನಿಕವಾಗಿ ಆಯೋಜಿಸುವಂತಾಗಬೇಕು ಎಂದು ಅವರು ಹೇಳಿದರು.

ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಚೇತನ್ ಮುಂಡಾಜೆ ಅವರು ಉಪನ್ಯಾಸ ನೀಡಿ, ಯುಗದ ಕಣ್ಣು ತೆರೆಸಿದ ಸಂತನಾಗಿರುವ ನಾರಾಯಣ ಗುರುಗಳು ಶೂದ್ರರಿಗಾಗಿ ದೇವಾಲಯವನ್ನು ಸ್ಥಾಪಿಸುವ ಮೂಲಕ ಆದರ್ಶರಾಗಿದ್ದು, ಸ್ವಂತಿಕೆಯ ಬೆಳವಣಿಗೆಗೆ ಪ್ರೇರಣೆ ನೀಡಿದ್ದರು ಎಂದರು.

ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ ಗುರುಗಳು ಅನಿಷ್ಠ ಪದ್ದತಿಗಳ ವಿರುದ್ದ ಹೋರಾಟ ಮಾಡಿದ್ದಲ್ಲದೆ,ದೇಶದಲ್ಲಿ ಜಾತಿ ತಾರತಮ್ಯ ಹೋಗಲಾಡಿಸಲು ಶ್ರಮಿಸಿದ್ದರು.ಅವರ ತತ್ವ,ಸಿದ್ದಾಂತ ಜೀವನದಲ್ಲಿ ಅಳವಡಿಸಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುವುದು ಎಂದರು. .
ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇನಾ ಸಂಘದ ಅಧ್ಯಕ್ಷ ಬಿ.ಸಂಜೀವ ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘ ಮಹಿಳಾ ವಿಭಾಗದ ಅಧ್ಯಕ್ಷೆ ಶೈಲಜಾ ರಾಜೇಶ್, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕ ರಮೇಶ್ ನಾಯಕ್ ರಾಯಿ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ವಿಜಯಕುಮಾರ್ , ಉಪತಹಶೀಲ್ದಾರ್ ಗಳಾದ ನರೇಂದ್ರಮಿತ್ತೂರು, ರಾಜೇಶ್ ನಾಯಕ್,ದಿವಾಕರ ಮುಗಳಿಯ, ಕಂದಾಯ ನಿರೀಕ್ಷಕವಿಜಯ್ ಆರ್.,ಜನಾರ್ದನ್ ಜೆ., ಉಪಸ್ಥಿತರಿದ್ದರು.
ಗ್ರಾಮಸಹಾಯಕ ಜನಾರ್ದನ್ ಬಂಟ್ವಾಳ ಸ್ವಾಗತಿಸಿದರು.ತಾಲೂಕು ಆಡಳಿತಾಧಿಕಾರಿ ಶ್ರೀಕಲಾ ಕಾರಂತ್ ವಂದಿಸಿದರು.ಉಪತಹಶೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು.