ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಎಂ. ಡಿ. ಶೆಟ್ಟಿ ಯವರಿಗೆ ನುಡಿ ನಮನ
ಮುಂಬಯಿ : ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಇದರ ವತಿಯಿಂದ ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ, ಮಹಾನಗರದ ಹಿರಿಯ ತುಳು ಕನ್ನಡಿಗ ದಿ. ಎಂ. ಡಿ. ಶೆಟ್ಟಿ ಇವರಿಗೆ ನುಡಿ ನಮನ ಸಲ್ಲಿಸಲಾಯಿತು.

ಜು. 22 ರಂದು ಸಂತಾಕ್ರೂಸ್ ಪೂರ್ವ ಬಿಲ್ಲವ ಭವನದಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರ ಉಪಸ್ಥಿತಿಯಲ್ಲಿ, ಅಧ್ಯಕ್ಷರಾದ ಎಲ್ ವಿ ಅಮೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ದಿ. ಎಂ ಡಿ ಶೆಟ್ಟಿ ಅವರಿಗೆ ನುಡಿ ನಮನ ಸಲ್ಲಿಸುತ್ತಾ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ಎಲ್. ವಿ. ಅಮೀನ್ ಅವರು ಎಂ ಡಿ ಶೆಟ್ಟಿ ಅವರು ಕೇವಲ ಬಂಟ ಸಮಾಜದ ಅಭಿವೃದ್ಧಿಗಾಗಿ ದುಡಿದದ್ದು ಮಾತ್ರವಲ್ಲದೆ ಇಡೀ ತುಳು ಕನ್ನಡಿಗರ ಸಮಾಜದ ಅಭಿವೃದ್ಧಿ ದುಡಿದ ಮಹಾನ್ ವ್ಯಕ್ತಿತ್ವವನ್ನು ಹೊಂದಿದವರು, ನಗರದ ಎಲ್ಲಾ ಸಮಾಜದವರ ಕಷ್ಟ ಸುಖಗಳಿಗೆ ಸ್ಪಂದಿಸಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ವಿಶೇಷ ವ್ಯಕ್ತಿತ್ವ ಅವರದ್ದುಎಂದು ನುಡಿದರು.
ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ದಿ. ಎಂ ಡಿ ಶೆಟ್ಟಿ ಅವರಿಗೆ ನುಡಿ ನಮನ ಸಲ್ಲಿಸುತ್ತಾ ಪರಿಸರ ಪ್ರೇಮಿ ಸಮಿತಿಯ ಬಹಳಷ್ಟು ಕಾರ್ಯಗಳು ಯಶಸ್ಸಿಯಾಗುವಲ್ಲಿ ಸಮರ್ಥ ರೀತಿಯಲ್ಲಿ ನಮಗೆ ಮಾರ್ಗದರ್ಶನ ನೀಡಿ ಸಹಕರಿಸಿದ್ದು ಮಾತ್ರವಲ್ಲದೆ ಅವರು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಂಘದ ಉನ್ನತ ಶೀಕ್ಷಣ ಯೋಜನೆ ಸೇರಿ ಹಲವಾರು ಪ್ರಮುಖ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಎಂದು ನುಡಿದರು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲ್ಯಾನ್ ಮುಂಡ್ಕೂರು ಅವರು ಸ್ವಾಗತಿಸಿದರು. ಪತ್ರಕರ್ತ ದಯಾಸಾಗರ ಚೌಟ ಅವರು ಎಂ ಡಿ ಶೆಟ್ಟಿಯವರ ಸಾಧನೆ ಬಗ್ಗೆ ಅವರು ನಡೆದು ಬಂದ ದಾರಿಯ ಬಗ್ಗೆ ಮಾಹಿತಿಯಿತ್ತರು.
ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಬಂಟರ ಸಂಘದ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸಿಎ. ಐ. ಆರ್. ಶೆಟ್ಟಿ, ಬಿಲ್ಲವರ ಅಸೋಷಿಯೇಶನಿನ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ, ಕೋಟ್ಯಾನ್, ದೇವಾಡಿಗ ಮಹಾಮಂಡಳದ ಅಧ್ಯಕ್ಷರಾದ ಧರ್ಮಪಾಲ ಯು, ದೇವಾಡಿಗ, ಕರ್ನಾಟಕ ವಿಶ್ವಕರ್ಮ ಅಸೋಷಿಯೇಶನಿನ ಅಧ್ಯಕ್ಷ ಸದಾನಂದ ಆಚಾರ್ಯ, ಮಾಜಿ ಅಧ್ಯಕ್ಷ ಜಿ ಟಿ. ಆಚಾರ್ಯ, ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ, ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯ, ಬಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ನ್ಯಾ, ಅರ್. ಎಂ. ಭಂಡಾರಿ, ಕುಲಾಲ ಸಂಘ ಮುಂಬಯಿಯ ಮಾಜಿ ಅಧ್ಯಕ್ಷರುಗಳಾದ ದೇವದಾಸ ಕುಲಾಲ್ ಮತ್ತು ಗಿರೀಶ್ ಬಿ. ಸಾಲ್ಯಾನ್, ವಿದ್ಯಾದಾಯಿನಿ ಸಭಾದ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್, ಗಾಣಿಗ ಸಮಾಜದ ಅಧ್ಯಕ್ಷ ರಾಮಚಂದ್ರ ಗಾಣಿಗ. ಗಣೇಶ್ ಶೆಟ್ಟಿ . ಸಂಜೀವ ಪೂಜಾರಿತೋನ್ಸೆ, ರಾಕೇಶ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದು ದಿ. ಎಂ. ಡಿ. ಶೆಟ್ಟಿಯವರಿಗೆ ನುಡಿ ನಮನ ಸಲ್ಲಿಸಿದರು.