ವಿದ್ಯಾರ್ಥಿಗಳು ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಬೇಕು:ಮೋಹನ್ ಆಳ್ವ, ಎಡಪದವು ರಾಮಮಂದಿರ ಟ್ರಸ್ಟ್ ನಿಂದ ವಿದ್ಯಾರ್ಥಿ ವೇತನ ವಿತರಣೆ
ಕೈಕಂಬ: ಶ್ರೀರಾಮ ಮಂದಿರ ಟ್ರಸ್ಟ್(ರಿ) ಎಡಪದವು ಇದರ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹಿರಿಯ ನಾಗರಿಕರಿಗೆ ಹಾಗೂ ಆಶಕ್ತರಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಎಡಪದವು ರಾಮಮಂದಿರದ ಪಟ್ಟಾಭೀರಾಮ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು.

ಸಹಾಯಧನ ಮತ್ತು ವಿದ್ಯಾರ್ಥಿ ವೇತನವನ್ನು ವಿತರಿಸಿ ಮಾತನಾಡಿದ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ದ ಅಧ್ಯಕ್ಷ ಡಾ. ಮೋಹನ್ ಆಳ್ವ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಗಂಭೀರವಾಗಿ ಪರಿಗಣಿಸಿ ಉತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸಬೇಕು. ಒಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ಪ್ರಾಥಮಿಕ ಶಾಲೆಯಿಂದ ಕಾಲೇಜುವರೆಗೆ ಸರಕಾರ ಶಾಲೆಗಳಿಗೆ ಮೂಲಭೂತ ಸೌಲಭ್ಯ, ಶಿಕ್ಷಕರ ವೇತನ ಸೇರಿದಂತೆ ಸುಮಾರು 30ರಿಂದ 60 ಸಾವಿರದವರೆಗೆ ವೆಚ್ಚ ಮಾಡುತ್ತದೆ.

ಇದು ಜನರ ತೆರಿಗೆಯ ದುಡ್ಡು ಇದನ್ನು ವ್ಯರ್ಥವಾಗಲು ವಿದ್ಯಾರ್ಥಿಗಳು ಬಿಡಬಾರದು ಅದರ ಸದುಪಯೋಗ ಮಾಡಿಕೊಳ್ಳಬೇಕು ಈ ಮೂಲಕ ಉತ್ತಮ ಶಿಕ್ಷಣವನ್ನು ಪಡೆಯಬೇಕು. ಜತೆಯಲ್ಲಿ ಸಂಘ-ಸಂಸ್ಥೆಗಳು ವಿತರಿಸುವ ವಿದ್ಯಾರ್ಥಿ ವೇತನವನ್ನು, ಸಹಾಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ರಾಮಮಂದಿರ ಟ್ರಸ್ಟ್ ಇಂದು ಆಶಕ್ತರಿಗೆ ಸಹಾಯಧನ ಮತ್ತು ವಿದ್ಯಾರ್ಥಿ ವೇತನ ವಿತರಣೆ ಮಾಡುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ತನ್ನ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಉದ್ಯಮಿ ಅಗರಿ ರಾಘವೇಂದ್ರ ರಾವ್ ಮಾತನಾಡಿ ರಾಮಮಂದಿರ ಟ್ರಸ್ಟ್ ಇಂದು ಸಮಾಜದಲ್ಲಿನ ಆಶಕ್ತರನ್ನು ಗುರುತಿಸಿ ಅವರ ಜೀವನಕ್ಕೆ ಕಿರು ಸಹಾಯ ಮಾಡಿರುವುದು ಅತ್ಯುತ್ತಮ ಕಾರ್ಯ ಜತೆಗೆ ವಿದ್ಯಾರ್ಥಿ ಗಳಿಗೆ ಸಹಾಯ ಮಾಡಿದ್ದು ವಿದ್ಯಾರ್ಥಿಗಳು ಈ ಸಹಾಯವನ್ನು ಸದುಪಯೋಗ ಮಾಡಿ ಉತ್ತಮ ಶಿಕ್ಷಣವನ್ನು ಪಡೆದು ಧರ್ಮದ ಹಾದಿಯಲ್ಲಿ ಬದುಕಿ ಊರಿಗೆ ಒಳ್ಳೆಯ ಹೆಸರನ್ನು ತರಬೇಕು ರಾಮಮಂದಿರದಂತಹ ಪುಣ್ಯ ಸ್ಥಳದಲ್ಲಿ ನಡೆಯುತ್ತಿರುವ ಇಂತಹ ಸಮಾಜಮುಖಿ ಕಾರ್ಯವನ್ನು ಮಾಡಿದ ಟ್ರಸ್ಟ್ ನ್ನು ಅಭಿನಂದಿಸಿದರು.

ಟ್ರಸ್ಟ್ ಕೋಶಾಧಿಕಾರಿ ಸುಬ್ರಮಣ್ಯ ಕೊರ್ಡೇಲ್ ಪ್ರಾಸ್ತಾವಿಕವಾಗಿ ಮಾತನಾಡಿ ಟ್ರಸ್ಟ್ ಸ್ಥಾಪನೆ, ಕಾರ್ಯನಿರ್ವಾಹಣೆ ಬಗ್ಗೆ ವಿವರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಜಪೆ ವಲಯ ಯೋಜನಾಧಿಕಾರಿ ಕರುಣಾಕರ ಆಚಾರ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
34 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ,6 ಹಿರಿಯ ನಾಗರಿಕರಿಗೆ ಮತ್ತು 12 ಆಶಕ್ತರಿಗೆ ಒಟ್ಟು 2ಲಕ್ಷ 14 ಸಾವಿರ ರೂಪಾಯಿ ಸಹಾಯಧನವನ್ನು ವಿತರಿಸಲಾಯಿತು.
ರಾಮಮಂದಿರ ಟ್ರಸ್ಟ್ ಅಧ್ಯಕ್ಷ ಗೋಪಾಲ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾ0ಶುಪಾಲ ಪದ್ಮನಾಭ ಎಚ್, ಎಡಪದವು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೇಮಾ, ಟ್ರಸ್ಟ್ ಉಪಾಧ್ಯಕ್ಷ ಉದಯಕುಮಾರ್ ರಾವ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಚಂದ್ರಶೇಖರ ಎಡಪದವು ಸ್ವಾಗತಿಸಿ ನಿರೂಪಿಸಿದರು. ಜತೆಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಂದಿಸಿದರು.