ಕನ್ನಡ ಸಾಹಿತ್ಯಾಭಿರುಚಿ ವೃದ್ಧಿಸಲು ಇನ್ನಷ್ಟು ಕಾರ್ಯಕ್ರಮಗಳ ಆಯೋಜನೆ: ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್
ಬಂಟ್ವಾಳ: ದ. ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯು ಜಿಲ್ಲಾ ಕ. ಸಾ. ಪ.ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ಬಿ. ಸಿ. ರೋಡ್ ನ ಕೈಕುಂಜದಲ್ಲಿರುವಕನ್ನಡ ಭವನದಲ್ಲಿ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಪರಿಷತ್ತಿನ ಚಟುವಟಿಕೆಗಳ ಪರಾಮರ್ಶೆ ನಡೆಸಲಾಯಿತು.

ತುಮಕೂರಿನಲ್ಲಿ ನಡೆದ ಕೇಂದ್ರ ಕಾರ್ಯಕಾರಿ ಸಮಿತಿಯ ಸಭೆಯ ಮಾಹಿತಿಯನ್ನು ನೀಡಿದ ಕಸಾಪಜಿಲ್ಲಾಧ್ಯಕ್ಷ ಡಾ.ಶ್ರೀನಾಥ ಅವರು ಸದಸ್ಯತ್ವ ಅಭಿಯಾನ ಮತ್ತು ಹೋಬಳಿ ರಚನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು. ನಿಧನ ಹೊಂದಿದ ಸದಸ್ಯರ ಮಾಹಿತಿ ಸಂಗ್ರಹ, ಒಂದು ದಿನದ ಗಡಿನಾಡ ಉತ್ಸವ ಏರ್ಪಾಟು, ಪರಿಷತ್ತಿನ ಡೈರೆಕ್ಟರಿಗೆ ಮಾಹಿತಿ ಸಂಗ್ರಹ, ಹಿರಿಯ ಸಾಹಿತಿಗಳ ಮನೆ ಭೇಟಿ, ಪ್ರಣಾಳಿಕೆಯಲ್ಲಿ ಘೋಷಿಸಿದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಬಗ್ಗೆ ಮಾಹಿತಿಯನ್ನು ಅವರು ನೀಡಿದರು.
ಶಾಲಾ ಕಾಲೇಜುಗಳಲ್ಲಿ ಕನ್ನಡ ಕಾರ್ಯಕ್ರಮಗಳು ನಿರಂತರವಾಗಿ ಏರ್ಪಡಿಸಲಾಗಿದ್ದು ಜಿಲ್ಲೆಯಾದ್ಯಂತ 250 ಕ್ಕೂ ಹೆಚ್ಚು ಪರಿಷತ್ತಿನ ಕಾರ್ಯಕ್ರಮಗಳು ನಡೆಸಿದ್ದರ ಬಗ್ಗೆ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು.ಸಭೆಯಲ್ಲಿ ಬಂಟ್ವಾಳ ಕ. ಸಾ. ಪ. ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಪುತ್ತೂರು ಕ. ಸಾ. ಪ. ಅಧ್ಯಕ್ಷ ಉಮೇಶ್ ನಾಯಕ್, ಮಂಗಳೂರು ಕ. ಸಾ. ಪ. ಅಧ್ಯಕ್ಷ ಮಂಜುನಾಥ್ ರೇವಣಕರ್, ಮೂಲ್ಕಿ ಕ. ಸಾ. ಪ. ಅಧ್ಯಕ್ಷ ಮಿಥುನ್ ಉಡುಪ, ಮೂಡಬಿದ್ರೆ ಕ. ಸಾ. ಪ. ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಕಡಬ ಕ. ಸಾ. ಪ. ಅಧ್ಯಕ್ಷ ಸೇಸಪ್ಪ ರೈ,ಸುಳ್ಯ ಕ. ಸಾ. ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು,ಜಿಲ್ಲಾ ಕ. ಸಾ. ಪ. ಪದಾಧಿಕಾರಿಗಳಾದ ಚಂದ್ರಹಾಸ ಶೆಟ್ಟಿ, ಯು. ಎಚ್. ಖಾಲಿದ್ ಉಜಿರೆ, ಕಿರಣ್ ಪ್ರಸಾದ್ ರೈ , ಕಾರ್ಯಕಾರಿಣಿಯ ಸದಸ್ಯರಾದ ಪೂವಪ್ಪ ನೆರಳಕಟ್ಟೆ, ರಾಮಚಂದ್ರ ಪಳ್ಳತಡ್ಕ, ಸುಂದರ ನಾಯ್ಕ್ ಭಾಗವಹಿಸಿದ್ದರು.ಜಿಲ್ಲಾ ಗೌರವ ಕಾರ್ಯದರ್ಶಿ ಎಂ. ರಾಜೇಶ್ವರಿ ಸ್ವಾಗತಿಸಿ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಬಿ.ಐತಪ್ಪ ನಾಯ್ಕ್ ವಂದಿಸಿದರು.