ಪರಿಸರ ಜಾಗೃತಿ ಮಾಹಿತಿ ಶಿಬಿರ
ಬಂಟ್ವಾಳ: ಪರಿಸರ ಉಳಿಸದಿದ್ದರೆ ನಮ್ಮ ಜೀವನ ಸರ್ವನಾಶ ಆಗುವುದರಲ್ಲಿ ಸಂಶಯವಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಹೇಳಿದರು.

ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜ ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್ ( ರಿ)ವಿಟ್ಲ ಇದರ ಕಲ್ಲಡ್ಕ ವಲಯದ ಕೆಲಿಂಜ ಒಕ್ಕೂಟದ ಹಾಗೂ ಕಲ್ಲಡ್ಕ ವಲಯ ಶೌರ್ಯ ವಿಪತ್ತು ತಂಡದ ಜಂಟಿ ಆಶ್ರಯದಲ್ಲಿ ನಡೆದ ಪರಿಸರ ಜಾಗೃತಿ ಮಾಹಿತಿ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು.ಪರಿಸರ ನಾಶದಿಂದ ಈಗಾಗಲೇ ನಾವು ಹಲವಾರು ವಿಪತ್ತುಗಳನ್ನು ಎದುರಿಸುತ್ತಿದ್ದು, ಇನ್ನಾದರೂ ಪರಿಸರವನ್ನು ಉಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷೆ ತುಳಸಿ ವಹಿಸಿದ್ದರು,ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಕೆಲಿಂಜ ಶಾಲಾ ಹಿರಿಯ ವಿದ್ಯಾರ್ಥಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲ. ಸಂತೋಷ್ ಶೆಟ್ಟಿ ಪೆಲತಡ್ಕ ಅತಿಥಿಯಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಶಾಲಾ ಸುತ್ತಮುತ್ತ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು, ಯೋಜನೆ ಹಾಗೂ ಶೌರ್ಯ ತಂಡದ ಸದಸ್ಯರಿಂದ ಶಾಲಾ ಆವರಣ ಸ್ವಚ್ಛತೆ ಮಾಡಲಾಯಿತು, ಶಾಲಾ ಮಕ್ಕಳಿಗೆ ಪರಿಸರಕ್ಕೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು,
ಯೋಜನೆಯ ವತಿಯಿಂದ ಶಾಲಾ ಎಲ್ಲಾ ಮಕ್ಕಳಿಗೆ ಉಚಿತವಾಗಿ ಮಗ್ಗಿ ಪುಸ್ತಕವನ್ನು ನೀಡಲಾಯಿತಲ್ಲದೆ ಪ್ರತಿ ಮಕ್ಕಳಿಗೆ ಒಂದು ಗಿಡವನ್ನು ನೀಡಿ ತಮ್ಮ ಮನೆಯಲ್ಲಿ ಸಸಿಯನ್ನು ತಮ್ಮ ಪೋಷಕರ ಸಹಕಾರದೊಂದಿಗೆ ನಾಟಿ ಮಾಡುವಂತೆ ತಿಳಿಸಿ ಉತ್ತಮ ರೀತಿಯಲ್ಲಿ ಸಸ್ಯವನ್ನು ಪೂಸಿಸಿದ ಮಕ್ಕಳಿಗೇ ಬರುವ ವಿಶ್ವ ಪರಿಸರ ದಿನದಂದು ಬಹುಮಾನ ನೀಡುವ ಸ್ಪರ್ಧೆಯನ್ನು ನೀಡಲಾಯಿತು.ಮಕ್ಕಳ ಪೋಷಕರಿಗೂ ಗಿಡಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಜಯಂತಿ, ವೀರಕಂಬ ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್, ಜಯಪ್ರಸಾದ್, ಯೋಜನೆಯ ಶೌರ್ಯ ವಿಪತ್ತು ತಂಡದ ಕಲ್ಲಡ್ಕ ವಲಯ ಅಧ್ಯಕ್ಷ ಮಾಧವ ಸಾಲಿಯನ್, ಕೆಲಿಂಜ ಒಕ್ಕೂಟ ಅಧ್ಯಕ್ಷ ದಯಾನಂದ್ ಮೊದಲಾದವರು ಉಪಸ್ಥಿತರಿದ್ದರು,
ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ ಸ್ವಾಗತಿಸಿ, ಯೋಜನೆ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು, ಶಾಲಾ ಶಿಕ್ಷಕಿ ಉಷಾ ಸುವರ್ಣ ಬಹುಮಾನ ಪಟ್ಟಿ ವಾಚಿಸಿದರು ಶಿಕ್ಷಕಿ ಮಂಜುಳಾ ವಂದಿಸಿದರು. ಕೆಲಿಂಜ ಒಕ್ಕೂಟ ಸೇವಾ ಪ್ರತಿನಿಧಿ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಶಿಕ್ಷಕಿಯರು ಸಹಕರಿಸಿದರು.