ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆಗೆ ಎಲ್ಲೈಸಿ ಸಂಸ್ಥೆಯಿಂದ ‘ಕುಡಿಯುವ ನೀರಿನ ಶುದ್ಧೀಕರಣ ಯಂತ್ರ’ ಕೊಡುಗೆ
ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆಗೆ ಭಾರತೀಯ ಜೀವ ವಿಮಾ ನಿಗಮ ಇದರ ೬೬ನೇ ವಿಮಾ ಸಪ್ತಾಹ ಪ್ರಯುಕ್ತ ರೂ ೫೫ಸಾವಿರ ವೆಚ್ಚದ ‘ಕುಡಿಯುವ ನೀರಿನ ಶುದ್ಧೀಕರಣ ಯಂತ್ರ’ ಹಸ್ತಾಂತರ ಸೋಮವಾರ ನಡೆಯಿತು.

ದೇಶದಲ್ಲಿ ಬಲಿಷ್ಟ ಆರ್ಥಿಕ ಸಂಸ್ಥೆಯಾಗಿ ಬೆಳೆದಿರುವ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆಯು ಜನರಲ್ಲಿ ಉಳಿತಾಯ ಮನೋಭಾವ ಮೂಡಿಸುವುದರ ಜೊತೆಗೆ ಸರ್ಕಾರಿ ಆಸ್ಪತ್ರೆ ಮತ್ತು ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಿಗೆ ವಿವಿಧ ಕೊಡುಗೆ ನೀಡುತ್ತಿದೆ ಎಂದು ಬಂಟ್ವಾಳ ಎಲ್ಲೈಸಿ ಶಾಖೆ ಮುಖ್ಯ ಪ್ರಬಂಧಕ ನಾರಾಯಣ ಗೌಡ ಹೇಳಿದ್ದಾರೆ.
ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ಜೀವ ವಿಮಾ ನಿಗಮ ಇದರ ೬೬ನೇ ವಿಮಾ ಸಪ್ತಾಹ ಪ್ರಯುಕ್ತ ರೂ ೫೫ಸಾವಿರ ವೆಚ್ಚದ ‘ಕುಡಿಯುವ ನೀರಿನ ಶುದ್ಧೀಕರಣ ಯಂತ್ರ’ ಸೋಮವಾರ ಹಸ್ತಾಂತರಿಸಿ ಅವರು ಮಾತನಾಡಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಕೋವಿಡ್ ಸಂಕಷ್ಟಗಳ ಬಳಿಕ ಆಸ್ಪತ್ರೆಯಲ್ಲಿ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ವಿವಿಧ ಮೂಲಭೂತ ಸೌಕರ್ಯ ಅಳವಡಿಸಲಾಗಿದೆ ಎಂದರು. ಪ್ರಮುಖರಾದ ಡಾ.ವೇಣುಗೋಪಾಲ್, ಡಾ.ಪ್ರಶಾಂತ್, ಹಿರಿಯ ಪ್ರತಿನಿಧಿ ನವೀನ್ ಕೊಡ್ಮಾಣ್, ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಇದ್ದರು.
ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಭಿವೃದ್ಧಿ ಅಧಿಕಾರಿಗಳಾದ ದಿನೇಶ ಮಾಮೇಶ್ವರ ವಂದಿಸಿ, ನಾರಾಯಣ ಬಲ್ಯ ಕಾರ್ಯಕ್ರಮ ನಿರೂಪಿಸಿದರು.