ಕೈಕಂಬ: ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳು ಮತ್ತು ಸಿಬಂದಿಗಳು ಕರ್ತವ್ಯ ನಿರ್ವಹಣೆ ಸಂಧರ್ಭದಲ್ಲಿ ತೋರುವ ಅಸಾಮಾನ್ಯ ಸಾಧನೆಗಾಗಿ ನೀಡುವ ಮುಖ್ಯಮಂತ್ರಿಗಳ ಪದಕ ಈ ಬಾರಿ ಕುಂದಾಪುರ ಅಗ್ನಿಶಾಮಕ ಇಲಾಖೆಯ ನಾಗರಾಜ ಪೂಜಾರಿಯವರಿಗೆ ಲಭಿಸಿದೆ. ಮುಖ್ಯಮಂತ್ರಿಗಳ 2020 ಸಾಲಿನ ಪದಕ ಪುರಸ್ಕ್ರತರ ಪಟ್ಟಿ ಬಿಡುಗಡೆಗೊಂಡಿದ್ದು ನಾಗರಾಜ ಪೂಜಾರಿ ಅವರನ್ನು ಪಟ್ಟಿಯಲ್ಲಿ ಪರಿಗಣಿಸಲಾಗಿದೆ.
ಕುಂದಾಪುರದಲ್ಲಿ ವೃದ್ಧರೋರ್ವರು ಬಾವಿಗೆ ಬಿದ್ದ ವೇಳೆ ತನ್ನ ಜೀವದ ಹಂಗು ತೊರೆದು ಬಾವಿಗೆ ಹಾರಿ ನಾಗರಾಜ ಪೂಜಾರಿಯವರು ವೃದ್ಧರನ್ನು ರಕ್ಷಿಸಿದ್ದರು ಅಲ್ಲದೆ ಹಲವು ಕಾರ್ಯಾಚರಣೆಗಳಲ್ಲಿ ಧೈರ್ಯಶಾಲಿಯಾಗಿ ಸಾರ್ವಜನಿಕರ ಹಾಗೂ ಹಿರಿಯ ಅಧಿಕಾರಿಗಳ ಪ್ರಶಂಶೆಗೆ ಪಾತ್ರರಾಗಿದ್ದ ನಾಗರಾಜ ಪೂಜಾರಿಯವರು ಉಡುಪಿ ಸಾಸ್ತಾನ ರಾಮಪೂಜಾರಿ ಮತ್ತು ರಾಧ ದಂಪತಿಗಳ ಮಗ . ತನ್ನ ವಿದ್ಯಾಬ್ಯಾಸ ಮುಗಿಸಿ 2008 ರಲ್ಲಿ ಅಗ್ನಿಶಾಮಕ ಇಲಾಖೆಗೆ ಸೇರಿದ್ದಾರೆ.
2010 ರಲ್ಲಿ ಕದ್ರಿ ಅಗ್ನಿಶಾಮಕದಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಮಂಗಳೂರು ವಿಮಾನ ದುರಂತ ಸೇರಿದಂತೆ ಯಾವುದೇ ತುರ್ತು ಕರೆಯ ಸಂದರ್ಭದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಸದಾ ಮುಂದಿರುವ ಇವರು ಮರವೂರಿನಲ್ಲಿ ನೆರೆ ಹಾವಳಿಯ ಸಂದರ್ಭದಲ್ಲಿ ಮಗುವೊಂದನ್ನು ರಕ್ಷಿಸಿ ಹಲವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಕುಂದಾಪುರ ಅಗ್ನಿ ಶಾಮಕದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರಿಗೆ ಇದೀಗ ಮುಖ್ಯ ಮಂತ್ರಿಗಳ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.

