ಕೈಕಂಬ: ಮೇಯಲು ಬಿಟ್ಟ ಎರಡು ಹಸುಗಳು ವಿಷಾಹಾರ ಸೇವಿಸಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡು ರಸ್ತೆ ಬದಿಯಲ್ಲಿ ಒದ್ದಾಡುತ್ತಿದ್ದ 2 ಹಸುಗಳ ಆರೈಕೆ ಮಾಡಿ ಮಾನವೀಯತೆ ಮೆರೆದ ಘಟನೆ ಎಡಪದವು ಸಮೀಪದ ಕೊರ್ಡೆಲ್ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಎಡಪದವು ಸಮೀಪದ ಕೊರ್ಡೆಲ್ ನಿವಾಸಿ ಉಮೇಶ್ ಎಂಬವರು ಏಳು ಹಸುಗಳನ್ನು ಸಾಕಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದು, ಹಸುಗಳನ್ನು ಪ್ರತಿದಿನ ಮುಂಜಾನೆ ಮೇಯಲು ಬಿಡುತ್ತಾರೆ ಕೊರ್ಡೆಲ್ ಸುತ್ತಮುತ್ತ ರಸ್ತೆಯುದ್ದಕ್ಕೂ ಮೇಯುವ ಹಸುಗಳು ವಾಪಾಸ್ ಹಟ್ಟಿ ಸೇರುತ್ತವೆ.
ಆದರೆ ಮಂಗಳವಾರ ಮೇಯಲು ಬಿಟ್ಟ ಎರಡು ಹಸುಗಳು ಎಡಪದವು-ಕುಪ್ಪೆಪದವು ರಸ್ತೆಯ ಬ್ರಿ0ಡೇಲ್, ನೆಲ್ಲಿಜೋರ ಎಂಬಲ್ಲಿ ಮೇಯುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಎಸೆದಿದ್ದ ತ್ಯಾಜ್ಯವನ್ನು ಕೆದಕಿ ಅದರಲ್ಲಿದ್ದ ಆಹಾರವನ್ನು ತಿಂದ ಪರಿಣಾಮವಾಗಿ ತೀವ್ರವಾಗಿ ಅಸ್ವಸ್ಥಗೊಂಡು ರಸ್ತೆ ಬದಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಓದ್ದಾಡುತ್ತಿರುವ ಬಗ್ಗೆ ಮಾಹಿತಿ ದೊರೆತ ಸ್ಥಳೀಯ ಮತ್ತು ಕುಪ್ಪೆಪದವಿನ ಹತ್ತಾರು ಯುವಕರು ಸ್ಥಳಕ್ಕೆ ಧಾವಿಸಿದ್ದು , ಒದ್ದಾಡಿ, ನರಳಾಡಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದ್ದ ಹಸುಗಳನ್ನು ಮೇಲೆತ್ತಿ ಆರೈಕೆ ಮಾಡಿ ಪಶುವೈದ್ಯರನ್ನು ಕರೆಸಿ ಔಷದೋಪಚಾರ ನೀಡಿ ಬದುಕಿಸಿ ಮಾನವೀಯತೆ ಮೆರೆದಿದ್ದಾರೆ.
ಹಸುಗಳ ಈ ಆರೈಕೆ ಸಂಜೆ 7 ಗಂಟೆಯಿಂದ ಸುಮಾರು 10 ಗಂಟೆ ರಾತ್ರಿವರೆಗೂ ನಡೆದಿತ್ತು. ಹಸುಗಳು ಒದ್ದಾಡುತಿದ್ದ ಸ್ಥಳ ಉಮೇಶ್ ಅವರ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರವಿದ್ದುದರಿಂದ ಉಮೇಶ್ ಅವರು ಅಲ್ಲಿಗೆ ತಲುಪುವಲ್ಲಿ ತಡವಾಗಿತ್ತು, ಆದರೆ ಯುವಕರು ಆರೈಕೆ ಮಾಡಿದ ಪರಿಣಾಮ ಎರಡೂ ಹಸುಗಳು ಬದುಕುಳಿದಿವೆ ಹಸುಗಳ ಒದ್ದಾಟದಿಂದಾಗಿ ಒಂದು ಹಸುವಿನ ಕಣ್ಣು ಬಾಯಿ ಗೆ ಗಾಯವಾಗಿದ್ದು ಇನ್ನೊಂದು ಹಸು ಗರ್ಭಿಣಿಯಾಗಿದ್ದು ನರಳಾಟದ ವೇಳೆ ಇದರ ನಾಲಿಗೆಗೆ ಗಾಯವಾಗಿದೆ.
ಅನಾರೋಗ್ಯವಿದ್ದರೂ ಓಡೋಡಿ ಬಂದ ಪಶುವೈದ್ಯರು:
ಯುವಕರು ಹಸುಗಳ ಆರೈಕೆ ಮಾಡಿ ಕುಪ್ಪೆಪದವು ಪಶು ಅರೋಗ್ಯ ಉಪ ಕೇಂದ್ರದ ವೈದ್ಯಾಧಿಕಾರಿ ಡಾ| ಶಿವಪ್ರಸಾದ್ ರೈ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಬಂದು ಔಷಧೋಪಚಾರ ಮಾಡುವಂತೆ ಕೇಳಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೂ ಶಿವಪ್ರಸಾದ್ ರೈ ಅವರು ತನ್ನ ಸಮಸ್ಯೆಯನ್ನು ಲೆಕ್ಕಿಸದೆ ಸ್ಥಳಕ್ಕೆ ಧಾವಿಸಿ ಅಗತ್ಯವಿದ್ದ ಚುಚ್ಚುಮದ್ದು ಸಹಿತ ಔಷಧಿ ನೀಡಿ ಹಸುಗಳನ್ನು ಬದುಕಿಸಬೇಕು ಎಂಬ ಯುವಕರ ಛಲಕ್ಕೆ ಸಾತ್ ನೀಡಿದ್ದರು.
ರಸ್ತೆಬದಿ ತ್ಯಾಜ್ಯ ವಿಷವಾಯಿತೇ!?: ಮಾನವ ನಿರ್ಮಿತ ತ್ಯಾಜ್ಯ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ಎಸೆದು ಪರಿಸರವನ್ನು ಮಾಲಿನ್ಯ ಮಾಡುತ್ತಿರುವುದಲ್ಲದೆ ಆಹಾರವನ್ನು ಹುಡುಕಿಕೊಂಡು ಬರುವ ಮೂಕಪ್ರಾಣಿಗಳ ಪಾಲಿಗೆ ವಿಷವಾಗುವಂತೆ ಮಾಡುತ್ತಿರುವುದು ಖೇದನೀಯ. ನೆಲ್ಲಿಜೋರದಲ್ಲಿ ರಸ್ತೆಯೆಯುದ್ದಕ್ಕೂ ರಾಶಿ ಬಿದ್ದಿರುವ ತ್ಯಾಜ್ಯವನ್ನು ಹಸುಗಳು, ನಾಯಿ ಸದಾ ಕೆದಕ್ಕುತ್ತಿರುವ ದ್ರಶ್ಯ ಸಾಮಾನ್ಯವಾಗಿದೆ. ತ್ಯಾಜ್ಯ ಎಸೆಯುವ ಮುನ್ನ ಒದ್ದಾಡಿದ ಹಸುಗಳ ಜಾಗದಲ್ಲಿ ಒಮ್ಮೆ ನಿಮ್ಮನ್ನು ಕಲ್ಪಿಸಿ ನೋಡಿ.

