*ಕೃಷಿ ಮಸೂದೆಯ ಬಗ್ಗೆ ರೈತರಿಗೆ ಜನಜಾಗೃತಿ ಮಾಡಬೇಕಾಗಿದೆ.*
ದೇಶದ ರೈತರ ಬದುಕನ್ನು ಹಸನುಗೊಳಿಸುವ ಉದ್ದೇಶದೊಂದಿಗೆ ಎರಡು ಮಹತ್ವದ ವಿಧೇಯಕಗಳಿಗೆ ಸಂಸತ್ತಿನಿಂದ ಅಂಗೀಕಾರ ದೊರೆತಿದೆ. ಇದರ ಬಗ್ಗೆ ಈಗಾಗಲೇ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.ಹೆಚ್ಚಿನ ರೈತರಿಗೆ ಈ ಮಸೂದೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಹೀಗಾಗಿ ಸಕಾ೯ರ ಈ ಬಗ್ಗೆ ಜನಜಾಗೃತಿ ಮಾಡಬೇಕಾದ ಅಗತ್ಯವಿದೆ.ಆದರೆ, ಈ ಹೊಸ ವಿಧೇಯಕಗಳನ್ನು ವಿರೋಧಿಸಿ ದೇಶಾದ್ಯಂತ ವಿರೋಧದ ಕೂಗು ಎದ್ದಿದೆ. ನಿರ್ದಿಷ್ಟವಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ವಿರೋಧದ ಕಾವು ಹೆಚ್ಚಾಗಿದೆ.

*ಈ ಮಸೂದೆಗಳಲ್ಲಿ ಏನಿದೆ ಎಂಬುದರ ಕಿರು ನೋಟ*: –
. ಕೃಷಿ ಅರ್ಥಶಾಸ್ತ್ರಜ್ಞ ಸುಧಾ ನಾರಾಯಣನ್ (ಐಜಿಐಡಿಆರ್) ಹೆಸರಿಸಿರುವವಂತೆ ಸುಗ್ರೀವಾಜ್ಞೆಗಳು ಹೀಗಿವೆ.
ಎಪಿಎಂಸಿ ಬೈಪಾಸ್ ಆರ್ಡಿನೆನ್ಸ್ ಮಾದರಿಯಲ್ಲಿ “ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020”
“ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರೀವಾಜ್ಞೆ, 2020” ಇದನ್ನು“ಕೃಷಿ ಉದ್ಯಮದ ಮೂಲಕ ಆಹಾರ ಸಂಗ್ರಹಣೆ ಸ್ವಾತಂತ್ರ್ಯ” ಸುಗ್ರೀವಾಜ್ಞೆ ಎಂದು ಭಾವಿಸಬಹುದು.
“ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ, 2020” ಇದನ್ನು ಗುತ್ತಿಗೆ ಕೃಷಿ ಸುಗ್ರೀವಾಜ್ಞೆಯಾಗಿ ಪರಿಗಣಿಸಲಾಗಿದೆ.
ಮೊದಲ ಮಸೂದೆ ಹೇಳುವುದೇನು?
ಎಪಿಎಂಸಿ-ನಿಯಂತ್ರಿತ ಮಂಡಿಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿಲೂ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವಂತೆ ಮಾಡುವುದಾಗಿದೆ. ಆದರೆ, ಇದು ಎಪಿಎಂಸಿಗಳನ್ನು ಸ್ಥಗಿತಗೊಳಿಸುವ ಪ್ರಯತ್ನ ಅಲ್ಲವೇ ಅಲ್ಲ. ರೈತರ ಉತ್ಪನ್ನಗಳ ಮಾರಾಟದ ಆಯ್ಕೆಗಳನ್ನು ವಿಸ್ತರಿಸುವುದು ಇದರ ಉದ್ದೇಶವಾಗಿದೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಖಾಸಗಿ ಖರೀದಿದಾರರೊಂದಿಗೂ ಉತ್ತಮ ವ್ಯವಹಾರ ಹೊಂದಿವುದು ಸಾಧ್ಯ ಎಂದು ರೈತ ನಂಬಿದರೆ, ಅವನು ಎಪಿಎಂಸಿ ಮಂಡಿಯಲ್ಲಿ ಮಾರಾಟ ಮಾಡುವ ಖಾಸಗಿ ಖರೀದಿದಾರನಿಗೇ ಮಾರಬಹುದಾಗಿದೆ.
*ಎರಡನೇ ಮಸೂದೆ?*
ಎರಡನೇ ಮಸೂದೆಯಲ್ಲಿ ಆರ್ಥಿಕ ಏಜೆಂಟರಿಗೆ ಯಾವುದೇ ಕಾನೂನು ಕ್ರಮದ ಭಯವಿಲ್ಲದೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಮುಕ್ತ ಅವಕಾಶ ನೀಡಲಾಗಿದೆ.
*ಮೂರನೇ ಮಸೂದೆ?*
ಮೂರನೆಯ ಮಸೂದೆ ರೈತರಿಗೆ ಗುತ್ತಿಗೆ ಕೃಷಿಗೆ ಪ್ರವೇಶಿಸಲು ಒಂದು ಚೌಕಟ್ಟನ್ನು ಒದಗಿಸುತ್ತದೆ – ಅದು ಆರೋಗ್ಯಕರ ಸಂಭಾವನೆಗೆ ಪ್ರತಿಯಾಗಿ ಕಂಪನಿಯು ಬಯಸಿದ್ದನ್ನು ಉತ್ಪಾದಿಸಲು ಕಂಪನಿಯೊಂದಿಗೆ ಲಿಖಿತ ಒಪ್ಪಂದಕ್ಕೆ ಸಹಿ ಹಾಕಲು ಈ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
ಈ ಮೂರು ಮಸೂದೆಗಳನ್ನು ಜಾರಿಗೆ ತರುವ ಮೂಲಕ ಕೃಷಿ ಮಾರುಕಟ್ಟೆಗಳನ್ನು ಉದಾರೀಕರಣಗೊಳಿಸುವುದೇ ಕೇಂದ್ರ ಸರಕಾರದ ಮುಖ್ಯಗುರಿಯಾಗಿದೆ. ಕೃಷಿಮಾರುಕಟ್ಟೆ ಉದಾರೀಕರಣದಿಂದ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗುತ್ತದೆ ಮತ್ತು ಸಂಬಂಧಪಟ್ಟ ಎಲ್ಲರಿಗೂ, ವಿಶೇಷವಾಗಿ ರೈತರಿಗೆ ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಲಿದೆ. ಅಲ್ಲದೆ ಕೃಷಿ ಕ್ಷೇತ್ರವನ್ನು ಈಗಿರುವುದಕ್ಕಿಂತಲೂ ಹೆಚ್ಚು ಆದಾಯ ಪಡೆಯುವ ಉದ್ಯಮವನ್ನಾಗಿ ಮಾಡುವುದು ಕೂಡ ಈ ಮಸೂದೆಗಳ ಆಶಯವಾಗಿದೆ.
*ವಿರೋಧಕ್ಕೆ ಕಾರಣವೇನು?* ರೈತರ ವಾದ
ಈ ಹೊಸ ಕೃಷಿ ಮಸೂದೆಗಳಿಂದಾಗಿ ಪ್ರಸ್ತುತ ಮುಕ್ತ ವ್ಯಾಪಾರ ನಡೆದಂತೆ ಆಗಲಿದೆ. ಇದು ಭಾರತದ ಆಹಾರ ನಿಗಮ (ಎಫ್ಸಿಐ) ಮತ್ತು ಇತರ ಕೇಂದ್ರ ಸಂಸ್ಥೆಗಳು ರಾಜ್ಯಗಳಿಂದ ವಾರ್ಷಿಕ ಗೋಧಿ ಮತ್ತು ಅಕ್ಕಿ ಖರೀದಿಯನ್ನು ಸ್ಥಗಿತಗೊಳಿಸುತ್ತವೆ ಎಂದು ಪ್ರತಿಭಟನಕಾರರು ಭಾವಿಸಿದ್ದಾರೆ. ಅಲ್ಲದೆ ಭಾರತದ ಆಹಾರ ನಿಗಮವು ಈ ಮಸೂದೆಯಿಂದಾಗಿ ಸಂಗ್ರಹ ವ್ಯವಸ್ಥೆಯನ್ನು ಕೊನೆಗೊಳಿಸಬಹುದು ಎನ್ನುವ ಭಯವು ಅವರನ್ನು ಕಾಡುತ್ತಿದೆ. ಮುಕ್ತ ಮಾರುಕಟ್ಟೆಯಿಂದಾಗಿ ರೈತರ ಮೇಲೆಯೇ ಎಲ್ಲಾ ಜವಾಬ್ಧಾರಿಗಳು ಬೀಳಬಹುದು ಎನ್ನುವುದು ಅವರ ವಾದವಾಗಿದೆ.ಆದರೆ ಸಕಾ೯ರ ಈ ಬಗ್ಗೆ ಸಂಸತ್ತಿನಲ್ಲಿ ಸ್ಪಷ್ಟವಾಗಿ ಹೇಳಿಕೆ ನೀಡಿದರೂ ಕೂಡ ಈ ಬಗ್ಗೆ ಪ್ರತಿಭಟನೆಗಳು ನಡೆಯುತ್ತಿರುವುದು ದುರಂತ.
ರಾಜ್ಯದಲ್ಲಿಯೂ ಕೂಡ ರೈತ ಸಂಘದವರು ಈ ಬಗ್ಗೆ ರಾಜ್ಯ ಬಂದ್ ಮಾಡುದಾಗಿ ಕರೆ ನೀಡಿದ್ದಾರೆ.ಆದರೆ ಈ ಮಸೂದೆಯ ಬಗ್ಗೆ ಸ್ಪಷ್ಟವಾದ ಮಾಹಿತಿ ಕೊರತೆಯಿಂದ ರೈತರಲ್ಲಿ ಗೊಂದಲ ಉಂಟಾಗುತ್ತಿದೆ. ಹೀಗಾಗಿ ಸಕಾ೯ರ ಈ ಮಸೂದೆಯ ಬಗ್ಗೆ ಜನರಲ್ಲಿ ಇಲಾಖೆಯ ಮೂಲಕ ಹಾಗೂ ಸಂಘ ಸಂಸ್ಥೆಗಳ ಮೂಲಕ ಜನ ಜಾಗೃತಿ ಮಾಡಬೇಕು. ಈ ಮಸೂದೆ ಮುಂದಿನ ದಿನಗಳಲ್ಲಿ ರೈತರಿಗೆ ಉಪಯೋಗಕಾರಿಯಾಗ ಬಹುದಾಗಿದೆ.
ರೈತರು ಭಾರತ ಬೆನ್ನೆಲುಬು ಮಾತ್ರವಲ್ಲ ದೇಶದ ಹೃದಯವಾಗಿದೆ.
ರಾಘವೇಂದ್ರ ಪ್ರಭು,ಕವಾ೯ಲು
ಯುವ ಲೇಖಕ