ದೆತ್ತಿಮಾರು: ರಸ್ತೆ ಬದಿಯ ಗಿಡಗಳನ್ನು ಕಿತ್ತೆಸೆದ ದುಷ್ಕರ್ಮಿಗಳು: ದೂರು
ಬಂಟ್ವಾಳ: ಪರಿಸರ ಪ್ರೇಮಿಯೋರ್ವರು ಸಾರ್ವಜನಿಕವಾಗಿ ರಸ್ತೆ ಬದಿಯಲ್ಲಿ ನೆಟ್ಟಿರುವ ಗಿಡಗಳನ್ನು ದುಷ್ಕರ್ಮಿಗಳು ಕಿತ್ತೆಸೆದ ಘಟನೆ ಬಡಗಕಜೆಕಾರು ಗ್ರಾಮದ ದೆತ್ತಿಮಾರು ಎಂಬಲ್ಲಿ ಸಂಭವಿಸಿದ್ದು, ಈ ಬಗ್ಗೆ ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದೆ.ಮಂಗಳೂರು ಗೃಹರಕ್ಷಕದಳದಲ್ಲಿ ಘಟಕಾಧಿಕಾರಿಯಾಗಿರುವ ಮಾರ್ಕ್ ಸೇರಾ ಅವರು ದೆತ್ತಿಮಾರು ನಿವಾಸಿಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ದೆತ್ತಿಮಾರು 2 ನೇ ಅಡ್ಡ ರಸ್ತೆಯ ಬದಿಗಳಲ್ಲಿ ಹೂವಿನ ಹಾಾಗೂ ಇತರೆ ಗಿಡಗಳನ್ನು ನೆಟ್ಟಿದ್ದರು. ಇದನ್ನು ರಾತೋರಾತ್ರಿ ಸ್ಥಳೀಯ ಐವರು ವ್ಯಕ್ತಿಗಳು ಕಿತ್ತೆಸೆದು ಧ್ವಂಸಗೊಳಿಸಿರುವುದಾಗಿ ಮಾರ್ಕ್ ಸೇರಾ ಅವರು ಲಿಖಿತವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು, ಬಂಟ್ವಾಳ ಅರಣ್ಯ ಇಲಾಖೆ ಹಾಗೂ ದ.ಕ. ಜಿ.ಪಂ. ಸಿಇಒ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ಐವರು ವ್ಯಕ್ತಿಗಳು ಗಿಡ ಕಿತ್ತೆಸೆಯುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿರುವುದಾಗಿಯು ದೂರಿನಲ್ಲಿ ತಿಳಿಸಲಾಗಿದೆ.ಮಾರ್ಕ್ ಸೇರಾ ಅವರು ಕೃಷಿ, ಅಂತರ್ಜಲ ವೃದ್ಧಿ, ಪರಿಸರ, ನೀರಿಂಗಿಸುವ ಇಂಗು ಗುಂಡಿ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡುತ್ತಿದ್ದು, ಅವರು ನೆಟ್ಟ ಗಿಡಗಳನ್ನು ಕಿತ್ತು ಬಿಸಾಕಿದ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖಂಡನೆ ವ್ಯಕ್ತವಾಗಿದೆ.ಸಿಸಿ ಕ್ಯಾಮರದಲ್ಲಿ ಸೆರೆಯಾಗಿರುವ ಗಿಡ ಕಿತ್ತೆಸೆಯುವ ದೃಶ್ಯದ ಪೂಟೇಜನ್ನು ದೂರಿನಲ್ಲಿ ಅಡಕಮಾಡಿದ್ದು,ಈ ದುಷ್ಕರ್ಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ