ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ, ಸಾಧಕರಿಗೆ ಗೌರವ ಹಾಗೂ ಸಂವಾದ ಕಾರ್ಯಕ್ರಮ ವಿಶ್ವವಿದ್ಯಾಲಯದ ಗೌರವ ವಿಶ್ವಮಾನ್ಯವಾದದ್ದು : ಕೆ.ಡಿ.ಶೆಟ್ಟಿ
ಮುಂಬಯಿ : ಸಂಸ್ಕಾರ ಸಂಸ್ಕೃತಿಯಿಂದಲೇ ಜೀವನದ ಯಶಸ್ಸು ಸಾಧ್ಯ. ಕೇವಲ ಹಣದಿಂದ ಏನೂ ಸಾಧಿಸಲಾಗದು. ಸಾಧನೆಗೆ ಹೃದಯಶ್ರೀಮಂತಿಕೆಯೇ ಮುಖ್ಯವಾಗಿದ್ದು ಎಲ್ಲಾ ಸಾಧನೆ ಸಿದ್ಧಿಗೆ ಹೃದಯ ದೊಡ್ಡದಾಗಿರಬೇಕು. ಕಾಯಕವೇ ಕೈಲಾಸ ಎಂದು ತಿಳಿದು ಬಾಳಿದ ನನಗೆ ತವರೂರ ಕರ್ನಾಟಕ ಸರಕಾರ ಗುರುತಿಸಿ ಗೌರವಿಸಿದೆ. ಇದಕ್ಕೆಲ್ಲ ಪೂರಕವೆಂಬಂತೆ ವಿಶ್ವವಿದ್ಯಾಲಯದ ಗೌರವವೂ ವಿಶ್ವಮಾನ್ಯದದ್ದು ಎಂದು ಭವಾನಿ ಫೌಂಡೇಶನ್ ನವಿ ಮುಂಬಯಿ ಇದರ ಸಂಸ್ಥಾಪಕಧ್ಯಕ್ಷ ಕುಸುಮೋದರ ಡಿ.ಶೆಟ್ಟಿ (ಕೆ.ಡಿ ಶೆಟ್ಟಿ) ಅಭಿಪ್ರಾಯಪಟ್ಟರು.ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಇಂದಿಲ್ಲಿ ಗುರುವಾರ ಸಾಂತಕ್ರೂಜ್ನ ವಿದ್ಯಾನಗರಿಯ ಕಲೀನಾ ಕ್ಯಾಂಪಸ್ನ ರಾನಡೆ ಭವನದಲ್ಲಿ ಆಯೋಜಿಸಿದ್ದ ಸಾಧಕರಿಗೆ ಗೌರವ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿನ್ನಲೆಯಲ್ಲಿ ಕನ್ನಡ ವಿಭಾಗದ ಗೌರವವನ್ನು ಸ್ವೀಕರಿಸಿ ಕೆ.ಡಿ ಶೆಟ್ಟಿ ಮಾತನಾಡಿದರು.
ನಾನೂ ಬಂಟರ ಸಂಘದ ಸಹಕಾರದಿಂದ ಕಲಿತವನು. ಬಂಟರ ಸಂಘದ ಕರ್ನಾಟಕ ಫ್ರೀ ನೈಟ್ ಹೈಸ್ಕೂಲು ಮತ್ತು ಶ್ರೀ ನಿತ್ಯಾನಂದ ಕನ್ನಡ ಫ್ರೀ ನೈಟ್ ಹೈಸ್ಕೂಲು ಓದಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ವಿದ್ಯೆ ಕಲಿಕೆಗೆ ವಯೋಮಿತಿ ಪರಿಮಿತಿಯ ಅವಶ್ಯಕತೆಕ್ಕಿಂತ ಕಲಿಯುವ ಉತ್ಸಾಹವೇ ಪ್ರಧಾನವಾದದ್ದು. ರಾತ್ರಿಶಾಲೆ ಓದಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ಸದ್ಯ ಹಣ ಗಳಿಕೆಕ್ಕಿಂತ ಜನರ ಪ್ರೀತಿಯನ್ನೇ ಮುಖ್ಯವಾಗಿಸಿ ಸಮಾಜ ಸೇವೆಯಲ್ಲಿ ತೊಡಗಿಸಿದ್ದು ಕೋಟ್ಯಾಂತರ ಕನ್ನಡಿಗರ ಮಧ್ಯೆ ನನಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತಿಸಿದ್ದು ನನ್ನ ಭಾಗ್ಯವೇ ಸರಿ. ವಿಶ್ವವಿದ್ಯಾಲಯದ ಈ ಆಹ್ವಾನದಿಂದ ಮತ್ತಷ್ಟು ಧನ್ಯನಾಗಿದ್ದೇನೆ ಎಂದೂ ಕೆ.ಡಿ ಶೆಟ್ಟಿ ತಿಳಿಸಿದರು.ಮೂರುವರೆ ವರ್ಷದಲ್ಲೇ ತಂದೆಯನ್ನು ಕಳೆದುಕೊಂಡ ನನಗೆ ತೀರ್ಥರೂಪರನ್ನು ಕಂಡ ನೆನಪಿಲ್ಲ. ಆದ್ದರಿಂದ ನನ್ನ ಸರ್ವಸ್ವವೇ ಮಾತೃಶ್ರೀ. ಆದ್ದರಿಂದ ಮಾತೃಭಾವ ನನ್ನ ಅವರ ಗರ್ಭದಲ್ಲೇ ಅಡಗಿದೆ. ನಾನು ಕನ್ನಡ ಮಾಧ್ಯಮದಲ್ಲಿ ಬರೇ ನಾಲ್ಕನೇ ತರಗತಿ ಓದಿದವನು. ಆದರೆ ಅವಿರತ ಶ್ರಮ, ಸೇವಾನಿಷ್ಠೆ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನನ್ನ ಬಾಲ್ಯ ತುಂಬಾ ಕಷ್ಟದಿಂದ ಕಳೆದಿದ್ದೇನೆ ಎಂದು ಭಾವೋದ್ವೆಗರಾಗಿ ಶಿವರಾಮ ಭಂಡಾರಿ ತಿಳಿಸಿದರು.ಮುಂಬಯಿಯಲ್ಲೇ ಕನ್ನಡದ ಕೈಂಕರ್ಯಗಳು ಹೆಚ್ಚಾಗಿ ನಡೆಯುತ್ತಿದೆ ಇದು ಇಡೀ ಜಗತ್ತಿಗೇ ತಿಳಿದ ವಿಚಾರ. ಇದಕ್ಕೆಲ್ಲಾ ಮೂಲ ಕಾರಣ ಕನ್ನಡಿಗರ ನಿಕಟವಾದ ಬಾಂಧವ್ಯ. ಮುಂಬಯಿ ಕನ್ನಡಿಗರು ಸದಾ ಸಾಮರಸ್ಯಕ್ಕೆ ಪ್ರಧಾನರು. ಹೊಂದಿಕೊಂಡು ಬಾಳುವ ಸದ್ಗುಣವೂ ನಮ್ಮಲ್ಲಿನ ದೊಡ್ಡತನ. ಮುಂಬಯಿ ರಾಷ್ಟ್ರದ ಆರ್ಥಿಕ ರಾಜಧಾನಿ, ಒಂದು ವಾಣಿಜ್ಯ ನಗರಿ ಆಗಿದ್ದರೂ ಎಲ್ಲಕ್ಕಿಂತ ಮಿಗಿಲಾಗಿ ವಿದ್ಯಾನಗರಿ ಅನ್ನುವುದು ಮುಖ್ಯವಾಗಿದೆ ಎಂದು ರೋನ್ಸ್ ಬಂಟ್ವಾಳ್ ತಿಳಿಸಿದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರಳ ಕಾರ್ಯಕ್ರಮದ ಲ್ಲಿ ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮುಖ್ಯ ಅತಿಥಿಯಾಗಿ, ಶಿವಾ’ಸ್ ಹೇರ್ ಡಿಝೈರ್ಸ್ ಪ್ರೈವೇಟ್ ಲಿಮಿಟೆಡ್ನ ಡಾ| ಶಿವರಾಮ ಕೆ.ಭಂಡಾರಿ ಅತಿಥಿಯಾಗಿದ್ದು ಡಾ| ಉಪಾಧ್ಯ ಅವರು ಕೆ.ಡಿ ಶೆಟ್ಟಿ ಅವರಿಗೆ ಸಾಲು ಹೊದಿಸಿ, ಸ್ವರ್ಣ ಪದಕವನ್ನಿತ್ತು ಕೃತಿಗಳನ್ನಿತ್ತು ಗೌರವಿಸಿದರು.ಇದೇ ಸಂದರ್ಭದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕಳೆದ ಜೂನ್ ತಿಂಗಳಲ್ಲಿ ನಡೆಸಿದ ಎಂ.ಎ ಸ್ನಾತಕೋತ್ತರ ಪರೀಕ್ಷೆಯಲ್ಲಿ ಸರ್ವಾಧಿಕ ಅಂಕ ಗಳಿಸಿ ಪ್ರಥಮ ಸ್ಥಾನವನ್ನು ಪಡೆದ ಕಲಾ ಭಾಗ್ವತ್ ಅವರಿಗೆ ಸ್ವರ್ಗೀಯ ಎಂ.ಬಿ ಕುಕ್ಯಾನ್ ಕೊಡಮಾಡಿದ ಸ್ವರ್ಣ ಪದಕವನ್ನಿತ್ತು, ಕನ್ನಡ ಡಿಪ್ಲೋಮಾ ಕೋರ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಸುಧಾ ಶೆಟ್ಟಿ ಮತ್ತು ೨೦೨೦ರ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಎಂ.ಎಯಲ್ಲಿ ೮೦ಕ್ಕೂ ಹೆಚ್ಚು ಪ್ರತಿಶತ ಅಂಕ ಗಳಿಸಿದ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಾದ ಶಶಿಕಲಾ ಹೆಗಡೆ, ಶಾಲಿನಿ ಡಿ.ಕೆ, ರುದ್ರಮೂರ್ತಿ ಪ್ರಭು ಹಾಗೂ ಕಲಾ ಸಂಘಟಕ ಕರ್ನೂರು ಮೋಹನ್ ರೈ ಮತ್ತು ವಿಶ್ವವಿದ್ಯಾಲಯದ ರೇಶ್ಮಾ ಮಾನೆ, ಅವರನ್ನು ಗೌರವಿಸಿದರು.ಕನ್ನಡಿಗರು ಹೆಮ್ಮೆ ಪಡೆಯುವ ಹಾಗೆ ನಿತ್ಯನಿತ್ಯ ನ್ನೆಯುವ ಅನುಪಮ ಸಾಧನೆ ಕೆ.ಡಿ ಶೆಟ್ರದ್ದು. ಅವರೋರ್ವ ಕನ್ನಡಿಗರಲ್ಲಿನ ಧೀಮಂತ ಚೇತನ. ಇವರನ್ನು ಗೌರವಿಸುವುದು ನಮ್ಮ ಸೌಭಾಗ್ಯವೇ ಸರಿ. ಜೊತೆಗೆ ಎಂಎ ಅಂತಿಮ ವರ್ಷದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿದ ಕಲಾ ಭಾಗ್ವತ್, ೪೦೦ ವಿದ್ಯಾರ್ಥಿಗಳ ಪೈಕಿ ವಿಭಾಗದ ಹಲವಾರು ವಿದ್ಯಾರ್ಥಿಗಳು ೮೦%ಕ್ಕಿಂತ ಅಧಿಕ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು ಕಳೆದ ೪೦ ವರ್ಷಗಳಲ್ಲೇ ಇದೇ ಮೊದಲಾಗಿದೆ. ಇಂದಿಲ್ಲಿ ವೈ.ಮಧುಸೂದನ ರಾವ್ ಅವರು ಮುಂಬಯಿ ಯಕ್ಷಗಾನ-ರಂಗಭೂಮಿ ಕುರಿತು ವಿಶೇಷ ಮಹಾಪ್ರಬಂಧ ಸಲ್ಲಿಸಿದ್ದು ಇದೆಲ್ಲಾ ವಿಭಾಗದ ಸಾಧನೆಗಳಾಗಿವೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ.ಎನ್ ಉಪಾಧ್ಯ ತಿಳಿಸಿದರು.ಕಲಾ ಭಾಗ್ವತ್, ಸುಧಾ ಶೆಟ್ಟಿ, ಕರ್ನೂರು ಮೋಹನ್ ರೈ, ರೇಶ್ಮಾ ಮಾನೆ ಸಾಂದರ್ಭಿಕವಾಗಿ ಮಾತನಾಡಿ ಡಾ| ಜಿ.ಎನ್ ಉಪಾಧ್ಯ ಅವರ ಅನುಪಮ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಸುರೇಖಾ ಹೆಚ್.ದೇವಾಡಿಗ, ಜಯ ಸಿ.ಸಾಲ್ಯಾನ್, ಶ್ರೀನಿವಾಸ್ ಪದನಿ ಸತೀಶ್ ಎನ್.ಬಂಗೇರ, ದುರ್ಗಪ್ಪ ಕೋಟಿಯವರ್ ಮತ್ತಿತರರು ಉಪಸ್ಥಿತರಿದ್ದು ಸಂವಾದದಲ್ಲಿ ಪಾಲ್ಗೊಂಡರು. ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ಹೆಗಡೆ ವಂದಿಸಿದರು.