ನಲ್ಕೆ ಬಾಕಿಮಾರು ೧೮ ರಂದು ಮಾರಿ ದೊಂಪದಬಲಿ ಉತ್ಸವ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೊಯಿಲ ಗ್ರಾಮ ಬೈದಗುತ್ತು ನಲ್ಕೆ ಬಾಕಿಮಾರು ಗದ್ದೆಯಲ್ಲಿ ನೂತನವಾಗಿ ದೈವದ ಕಟ್ಟೆ ನಿಮಾಣಗೊಳ್ಳುತ್ತಿದೆ. ನಲ್ಕೆ ಬಾಕಿಮಾರು ೧೮ ರಂದು ಭಾನುವಾರ ಮಾರಿ ದೊಂಪದಬಲಿ ಉತ್ಸವ. ಇಲ್ಲಿನ ರಾಯಿ ಸಮೀಪದ ಕೊಯಿಲ ಗ್ರಾಮ ಬೈದಗುತ್ತು ನಲ್ಕೆ ಬಾಕಿಮಾರು ಗದ್ದೆ ಎಂಬಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ದೈವ ಸಾನಿಧ್ಯದಲ್ಲಿ ಇದೇ ೧೮ರಂದು ರಾತ್ರಿ ಗಂಟೆ ೭ರಿಂದ ಧೂಮಾವತಿ ಮತ್ತು ಮೈಸಂದಾಯ ಸಹಿತ ಕೊಡಮಣಿತ್ತಾಯ ಒಡ್ಯಾಣೇಶ್ವರಿ ಪರಿವಾರ ದೈವಗಳಿಗೆ ಪ್ರಥಮ ವರ್ಷದ ಮಾರಿ ‘ದೊಂಪದ ಬಲಿ ಉತ್ಸವ’ ನಡೆಯಲಿದೆ.ಅಂದು ಬೆಳಿಗ್ಗೆ ಗಂಟೆ ೧೦ರಿಂದ ನಡ್ವಂತಾಡಿ ಉದಯ ಪಾಂಗಣ್ಣಾಯ ತಂತ್ರಿ ಮತ್ತು ಅರಳ ಹರೀಶ ಭಟ್ ಮಾರ್ಗದರ್ಶನದಲ್ಲಿ ಗಣಹೋಮ, ದುರ್ಗಾಹೋಮ, ಕಲಶಾಭಿಷೇಕ ನಡೆಯಲಿದ್ದು, ಮಧ್ಯಾಹ್ನ ೧ ಗಂಟೆಗೆ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ ೬.೩೦ ಗಂಟೆಗೆ ಈರೇಂದಿಲು ಗುತ್ತು, ರಾತ್ರಿ ಗಂಟೆ ೮ಕ್ಕೆ ಕೊಯಿಲ ಹಾಂತ್ಲಾಜೆಗುತ್ತು, ರಾತ್ರಿ ೯.೩೦ ಗಂಟೆಗೆ ಬುರಾಲು ಮನೆಯಿಂದ ದೈವಗಳ ಭಂಡಾರ ಬಂದು ದೈವಗಳಿಗೆ ದೊಂಪದ ಬಲಿ ಉತ್ಸವ ಮತ್ತು ಕಲ್ಕುಡ-ಕಲ್ಲುರ್ಟಿ ದೈವಗಳಿಗೆ ಕೋಲ ಬಲಿ ಸೇವೆ ನಡೆಯಲಿದೆ. ಇದೇ ವೇಳೆ ಸಂಜೆ ೬ ಗಂಟೆಗೆ ಕೊಯಿಲ ತೆಲಿಕೆದ ಕಲಾವಿದರಿಂದ ‘ಪಂಡ ಕೇನುಜೆರ್’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.