ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ
ಮೂಡುಬಿದಿರೆ: ಕಳೆದ ಒಂದು ವಾರದ ಹಿಂದೆ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಿಂದ ನಾಪತ್ತೆಯಾಗಿದ್ದ ವಿಠಲ ಬಂಗೇರ ಅವರ ಮೃತ ದೇಹವು ಮೂಡುಬಿದಿರೆ ತಾಲೂಕಿನ ಪಡುಕೋಣಾಜೆ ಗ್ರಾಮದ ಹೌದಾಲ್ನ ಕೊಣಾಜೆಕಲ್ಲಿನ ಬಳಿ ಭಾನುವಾರ ಪತ್ತೆಯಾಗಿದೆ.
61ರ ಹರೆಯದ ವಿಠಲ ಬಂಗೇರಾ ಅವರು ಕುರಿಯಾಳದ ದುರ್ಗಾ ನಗರದಲ್ಲಿರುವ ತನ್ನ ಮನೆಯಿಂದ ವಾರದ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಟ್ವಾಳದಿಂದ ಮೂಡುಬಿದಿರೆ ಕಡೆಗೆ ಬಂದಿದ್ದಾರೆಂಬ ಮಾಹಿತಿಯೂ ಮನೆಯವರಿಗೆ ತಿಳಿದಿತ್ತು. ಆದರೆ ಅವರು ಎಲ್ಲಿಗೆ ಹೋಗುತ್ತೇನೆಂದು ಹೇಳದೆ ಮನೆಯಿಂದ ಹೋರಟಿದ್ದರಿಂದ ಮತ್ತು ಮತ್ತೆ ಮನೆಯವರ ಸಂಪರ್ಕಕ್ಕೆ ಸಿಗದಿದ್ದರಿಂದ ಠಾಣೆಯಲ್ಲಿ ನಾಪತ್ತೆಯ ದೂರು ನೀಡಿದ್ದರು.
ಕೊಣಾಜೆಕಲ್ಲಿನ ಗುಡ್ಡದ ಬಳಿ ಇರುವ ಕಲ್ಲಿನ ಮೇಲೆ ಮಲಗಿದ ಸ್ಥಿತಿಯಲ್ಲಿ ಕೊಳೆತ ಮೃತ ದೇಹವು ಪತ್ತೆಯಾಗಿದೆ. ಕೊಣಾಜೆಕಲ್ಲಿಗೆ ಹೋಗುವ ಒಳರಸ್ತೆಯಲ್ಲಿ ಹೋದವರು ಯಾವುದೋ ಅಸೌಖ್ಯದಿಂದಲೋ ಅಥವಾ ಖಾಯಿಲೆಯ ಬಾಧೆಯಿಂದಲೋ ಬಳಲಿ ಕೊಣಾಜೆಕಲ್ಲಿನ ಗುಡ್ಡದ ಮೇಲೆ ಮಲಗಿದಲ್ಲಿಯೇ ಮೃತಪಟ್ಟಿರಬಹುದೆಂದು ಮೂಡುಬಿದಿರೆ ಪೊಲೀಸರು ತಿಳಿಸಿದ್ದಾರೆ.