ಗೋಳಿದಡಿ ಗುತ್ತಿನ `ವರ್ಷದ ಗುತ್ತುದ ಪರ್ಬೊ
ಕೈಕಂಬ : ಗುರುಪುರ ಗೋಳಿದಡಿ ಗುತ್ತಿನ `ವರ್ಷದ ಗುತ್ತುದ ಪರ್ಬೊ'(ವಾರ್ಷಿಕ ಹಬ್ಬ) ಮಂಗಳವಾರ ಪ್ರಾತಃಕಾಲದಲ್ಲಿ ಶ್ರೀಮತಿ ಮತ್ತು ಶ್ರೀ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಹಾಗೂ ಅವರ ಮಕ್ಕಳ ಉಪಸ್ಥಿತಿಯಲ್ಲಿ ಗುತ್ತಿನ ಚಾವಡಿಯ ಶ್ರೀ ಧರ್ಮದೇವತೆಗಳಾದ ಶ್ರೀ ವೈದ್ಯನಾಥಾದ್ಯ ಪಂಚ ದೇವತೆಗಳಿಗೆ ವಿಶೇಷ ಪೂಜೆಯೊಂದಿಗೆ ಆರಂಭಗೊಂಡಿತು.
ಕೋವಿಡ್ ನಿಯಮಾವಳಿಯಂತೆ ಈ ವರ್ಷ ಶಕ್ತಿಕಲ್ಲು ಎತ್ತುವ ಸ್ಪರ್ಧೆ, `ಗ್ರಾಮೀಣ ಸಿರಿ’ ಸಂತೆ-ಪ್ರದರ್ಶನ ರದ್ದುಗೊಳಿಸಲಾಗಿದ್ದರೂ, ಚಾವಡಿಯಲ್ಲಿ ಗೋಳಿದಡಿ ಗುತ್ತಿನ ಚಾವಡಿಯ ಮಿತ್ರ ಬಳಗದವರಿಂದ ಸುಶ್ರಾವ್ಯ ಭಜನಾ ಸಂಕೀರ್ತನೆ ನಡೆಯಿತು.
ಭಜನಾ ಸಂಕೀರ್ತನೆಯಲ್ಲಿ ಟಿ ವಿ ಗಿರೀಶ್ ಮುಡಿಪು ಹಾಗೂ ಅರುಣಾ ರಾವ್ ಕಟೀಲು ಹಾಡಿದರು. ಇವರಿಗೆ ಸಂಗೀತ ಪರಿಕರದಲ್ಲಿ ಪ್ರಸಾದ್(ರಿದಂ ಪ್ಯಾಡ್), ಸತೀಶ್ ಸುರತ್ಕಲ್(ಕೀ ಬೋರ್ಡ್), ಕುಂಬ್ಳೆ ಶ್ರೀಧರ(ತಬ್ಲ) ಸಾಥ್ ನೀಡಿದರು.
ಭಕ್ತರಿಗೆ ಕಲ್ಲಂಗಡಿ,
ಗಾಜಿನ ಬಳೆ ಪ್ರಸಾದ :
ಹಿಂದಿನಂತೆ ಈ ವರ್ಷವೂ ಗುತ್ತಿನ ವಾರ್ಷಿಕ ಹಬ್ಬದ ಸಂಪ್ರದಾಯದಂತೆ ಪ್ರತಿಯೊಬ್ಬ ಭಕ್ತರಿಗೆ ಕಲ್ಲಂಗಡಿ ವಿತರಣೆ ಹಾಗೂ ಮಹಿಳೆಯರಿಗೆ ಗಾಜಿನ ಬಳೆ ಇಡುವ ಸಂಸ್ಕೃತಿ ಮುಂದುವರಿದಿದ್ದು, ಬಳೆ ಧರಿಸಿಕೊಳ್ಳಲು ನೂರಾರು ಮಹಿಳೆಯರು ಸರತಿ ಸಾಲಿನಲ್ಲಿ ನಿಂತಿದ್ದರು. ಎಂದಿನಂತೆ ಅನ್ನಸಂತರ್ಪಣೆ ಬಳಿಕ ಎಲ್ಲರಿಗೂ ಒಂದೊಂದು ಕಲ್ಲಂಗಡಿ ವಿತರಿಸಲಾಯಿತು. \
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹಾಗೂ ಇತರ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.