ಮೂಡುಬಿದಿರೆಯಲ್ಲಿ ರೈತ ಸಂಘರ್ಷ ಸಮಿತಿಯಿಂದ ವಾಹನ ಜಾಥ, ಬಹಿರಂಗ ಸಭೆ
ಮೂಡುಬಿದಿರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ದಲಿತ, ಕಾರ್ಮಿಕರ ಮತ್ತು ಜನವಿರೋದಿ ಮಸೂದೆಗಳನ್ನು ಜಾರಿಗೊಳಿಸಿದೆನೆಂದು ಆರೋಪಿಸಿ, ಅವುಗಳನ್ನು ಹಿಂತೆಗೆಯುವಂತೆ ಆಗ್ರಹಿಸಿ, ಭಾರತೀಯ ಕೃಷಿ ಪರಂಪರೆ ಹಾಗೂ ಸಂಪತ್ತನ್ನು ಉಳಿಸುವ ಸಲುವಾಗಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದಿಂದ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ವಾಹನ ಜಾಥಾ ಹಾಗೂ ಬಹಿರಂಗ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ, ದೇಶದ ಸಂಪತ್ತನ್ನು ಲೂಟಿ ಹೊಡೆಯಲು ಕೇಂದ್ರ ಸರ್ಕಾರವು ಖಾಸಗೀರಣವನ್ನು ತಂದಿದೆ. 20 ಲಕ್ಷ ಕೋಟಿ ರೂಪಾಯಿ ಕೊರೊನಾ ಪ್ಯಾಕೇಜ್ನಲ್ಲಿ 1500 ಲಕ್ಷ ಕೋಟಿ ರೂಪಾಯಿಯನ್ನು ಮೋದಿಯವರು ಗೌತಮ್ ಅದಾನಿಗೆ ನೀಡಿರುವುದು ಖಾಸಗೀಕರಣ ನೀತಿಗೆ ಸ್ಪಷ್ಟ ಉದಾಹರಣೆ.
ಬಹುರಾಷ್ಟ್ರ ಕಂಪೆನಿಗಳ ಏಳಿಗೆಗಾಗಿ ಶ್ರಮಿಸುತ್ತಿರುವ ಕೇಂದ್ರ ಸರ್ಕಾರ ಬಡ ಕಾರ್ಮಿಕರನ್ನು, ರೈತರ ಏಳಿಗೆಯನ್ನು ಮರೆತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಜನವಿರೋಧಿ ನೀತಿಗಳನ್ನು ಜಾರಿಗೆ ನೀಡುವ ಮೂಲಕ ದೇಶದ ಜನತೆಯನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದರು.
ಮುಖಂಡರಾದ ಆಲ್ವಿನ್ ಮೆನೇಜಸ್, ರವಿ ಕಿರಣ ಪುಣಚ, ಸುಭಾಶ್ಚಂದ್ರ ಚೌಟ, ಮನೋಹರ ಶೆಟ್ಟಿ, ಲಿಯೋ ವಾಲ್ಟರ್ ನಜರತ್, ರೋನಿ ಮೆಂಡೊನ್ಸ, ರಮಣಿ, ಕೃಷ್ಣಪ್ಪ ಪೂಜಾರಿ ಮತ್ತಿರರು ಉಪಸ್ಥಿತರಿದ್ದರು.