ಎಡಪದವು: ನಿವೇಶನ ಹಕ್ಕುಪತ್ರ, ಕೃಷಿ ಸಲಕರಣೆ, ಟ್ರ್ಯಾಕ್ಟರ್ ಮತ್ತು ವಿಧವಾ/ವೃದ್ಯಾಪ್ಯ ವೇತನ, ಪ್ರಕ್ರತಿ ವಿಕೋಪ ಪರಿಹಾರ ಧನದ ಚೆಕ್ ಗಳ ವಿತರಣೆ
ಕೈಕಂಬ: ರಸ್ತೆಗಳು ಅಭಿವೃದ್ಧಿಯಾದರೆ ಊರಿನ ಅಭಿವೃದ್ಧಿಯಾಗುತ್ತದೆ ಅದೇ ರೀತಿ ಉದ್ಯೋಗ ಸಂಬಂದಿತ ಸಲಕರಣೆಗಳನ್ನು ಜನರಿಗೆ ನೀಡುವುದರಿಂದ ಅವರ ಜೀವನ ಮಟ್ಟ ಅಭಿವೃದ್ಧಿಯಾಗುತ್ತದೆ, ವಸತಿ ರಹಿತರಿಗೆ ಜಾಗದ ಹಕ್ಕುಪತ್ರ ನೀಡಿ ಅವರು ಆ ಜಾಗದಲ್ಲಿ ಸ್ವಂತ ಮನೆ ಹೊಂದಿದಾಗ ಅವರ ಮುಖದಲ್ಲಿ ವ್ಯಕ್ತವಾಗುವ ಸಂತೋಷ ನೋಡಿದಾಗ ಜನಪ್ರತಿನಿಧಿಗಳ ಕೆಲಸ ಸಾರ್ಥಕವಾಗುತ್ತದೆ, ಅಧಿಕಾರಿಗಳು ನೀಡುತ್ತಿರುವ ಸಹಕಾರದಿಂದಾಗಿ ನನ್ನ ಕ್ಷೇತ್ರದ ಅಭಿವೃದ್ಧಿ ಸುಲಭವಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ವೈ. ಶೆಟ್ಟಿ ಹೇಳಿದರು.
ಅವರು ಮಂಗಳವಾರ ಎಡಪದವು ರಾಮಮಂದಿರದ ಸಭಾಭವನದಲ್ಲಿ ನಡೆದ ಎಡಪದವು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ, ಕೃಷಿ ಸಲಕರಣೆ, ಟ್ರ್ಯಾಕ್ಟರ್ ಮತ್ತು ವಿಧವಾ/ವೃದ್ಯಾಪ್ಯ ವೇತನ, ಪ್ರಕ್ರತಿ ವಿಕೋಪ ಪರಿಹಾರ ಧನದ ಚೆಕ್ ಗಳ ವಿತರಣಾ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ನಡೆದ ಅಭುವೃದ್ದಿ ಕಾರ್ಯಕ್ರಮಗಳು, ಕೃಷಿ ಸಲಕರಣೆಗಳು ಮತ್ತು ಗರಿಷ್ಠ ಹಕ್ಕುಪತ್ರ ವಿತರಣೆಯಾಗಲು ಶಾಸಕರು ಮತ್ತು ಕೃಷಿ, ಕಂದಾಯ ಅಧಿಕಾರಿಗಳ ಸಹಕಾರವೇ ಕಾರಣವಾಗಿದೆ ಇದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ಒಟ್ಟು 96 ಫಲಾನುಭವಿಗಳಿ ಹಕ್ಕುಪತ್ರ, 5 ಹುಲ್ಲು ಕತ್ತರಿಸುವ ಯಂತ್ರ, 11 ಫಲಾನುಭವಿಗಳಿಗೆ ಪ್ರಕ್ರತಿ ವಿಕೋಪ ಪರಿಹಾರದ ಚೆಕ್, 13 ಜನರಿಗೆ ವಿಧವಾ ಮತ್ತು ವೃದಾಪ್ಯ ವೇತನ ಮಂಜೂರಾತಿ ಪತ್ರಗಳನ್ನು ಹಾಗು ಕೊಂಪದವಿನ ರೈತ ರಾಜೇಂದ್ರ ಪಿಂಟೋ ಅವರಿಗೆ ಟ್ರ್ಯಾಕ್ಟರ್ ಅನ್ನು ವಿತರಿಸಲಾಯಿತು. ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ವೀಣಾ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು, ಅಕ್ರಮ -ಸಕ್ರಮ ಸಮಿತಿಯ ಸದಸ್ಯ ಗಣೇಶ್ ಪಾಕಜೆ, ಮಂಗಳೂರು ಎಪಿಎಂಸಿ ಸದಸ್ಯ ರುಕ್ಮಯ ನಾಯ್ಕ್, ಕಂದಾಯ ಅಧಿಕಾರಿ ಆಸೀಫ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಕರಣಿಕರು, ಸಂಬಂದಿತ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಟ್ರ್ಯಾಕ್ಟರ್ ಚಲಾಯಿಸಿದ ಶಾಸಕರು:
ಕೊಂಪದವಿನ ರೈತ ರಾಜೇಂದ್ರ ಪಿಂಟೋ ಅವರಿಗೆ ಟ್ರ್ಯಾಕ್ಟರ್ ಹಸ್ತಾಂತರಿಸುವ ಮುನ್ನ ಟ್ರ್ಯಾಕ್ಟರ್ ಏರಿದ ಶಾಸಕ ಭರತ್ ಶೆಟ್ಟಿಯವರು ರಾಜೇಂದ್ರ ಪಿಂಟೋ ಅವರಿಂದ ಚಾಲನೆಯ ಬಗ್ಗೆ ಮಾಹಿತಿ ಕೇಳಿ ಒಂದಷ್ಟು ದೂರ ಟ್ರ್ಯಾಕ್ಟರ್ ಚಲಾಯಿಸಿ ನಂತರ ರಾಜೇಂದ್ರ ಅವರಿಗೆ ಟ್ರ್ಯಾಕ್ಟರ್ ಕೀ ಯನ್ನು ಹಸ್ತಾಂತರಿಸಿದರು.
ಗುರುಪುರ ನಾಡಕಚೇರಿಯ ಉಪತಹಶೀಲ್ದಾರ್ ಶಿವಪ್ರಸಾದ್ ಸ್ವಾಗತಿಸಿದರು ಕುಶಾಲ್ ಕುಮಾರ್ ಎಡಪದವು ನಿರೂಪಿಸಿ ಎಡಪಪದವು ಪಂಚಾಯತ್ ಕಾರ್ಯದರ್ಶಿ ಇಸ್ಮಾಯಿಲ್ ವಂದಿಸಿದರು.