ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ
ಶ್ರೀನಿವಾಸಪುರ: ಸತತವಾಗಿ ಕಳೆದ 6ವರ್ಷಗಳಿಂದ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳಿಗೆ ಪಕ್ಷಾತೀತ, ಜ್ಯಾತ್ಯಾತೀತ ಹಾಗೂ ರಾಜಕೀಯ ರಹಿತವಾಗಿ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದ್ದು, ಇದಕ್ಕೆ ರಾಜಕೀಯ ಮುಖಂಡರು ಕೈಜೋಡಿಸಿದರೆ ಈ ಯೋಜನೆಯನ್ನು ಮತ್ತಷ್ಟು ಚೈತನ್ಯಗೊಳಿಸಬಹುದು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಪಟ್ಟಣದ ಡಿ.ಸಿ.ಸಿ.ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಗೌನಿಪಲ್ಲಿ ಮತ್ತು ಕೂರಿಗೆಪಲ್ಲಿ ಸಹಕಾರ ಸಂಘಗಳ ವ್ಯಾಪ್ತಿಯ 68ಮಹಿಳಾ ಸಂಘಗಳಿಗೆ 3.24ಕೋಟಿ ಸಾಲದ ಚೆಕ್ಗಳನ್ನು ವಿತರಿಸಿ ಮಾತನಾಡಿದರು.
ಸ್ವ-ಸಹಾಯ ಸಂಘಗಳಿಗೆ ನೀಡುತ್ತಿರುವ ಶೂನ್ಯ ಬಡ್ಡಿ ಸಾಲದ ಆದೇಶವನ್ನು ತಕ್ಷಣ ಸರ್ಕಾರ ನೀಡಬೇಕಾಗಿದೆ. ಈ ವಿಚಾರದಲ್ಲಿ ಶಾಸಕ ರಮೇಶ್ಕುಮಾರ್ರವರು ರಾಜ್ಯ ಮಟ್ಟದ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕಾರ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಶೂನ್ಯ ಬಡ್ಡಿ ವಿಚಾರದಲ್ಲಿ ಹೆಣ್ಣು ಮಕ್ಕಳಿಗೆ ಗೊಂದಲವಾಗಿದೆ. ಆದ್ದರಿಂದ ಸರ್ಕಾರ ತತತಕ್ಷಣ 2020-21ನೇ ಸಾಲಿನ ಆದೇಶವನ್ನು ಹೊರಡಸಬೇಕಾಗಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋಲಾರ ಡಿ.ಸಿ.ಸಿ. ಬ್ಯಾಂಕ್ಗೆ 40ಕೋಟಿ ಬಡ್ಡಿ ಹಣ ಬಾಕಿ ಇದೇ. ಇದನ್ನು ಬಿಡುಗಡೆಗೊಳಿಸಲು ಶಾಸಕ ರಮೇಶ್ಕುಮಾರ್ರವರು ಮುಖ್ಯಮಂತ್ರಿ ಹಾಗೂ ಸಹಕಾರ ಮಂತ್ರಿಗಳ ಗಮನ ಸೆಳೆದಿದ್ದಾರೆ. ಇದರಿಂದ ರಾಜ್ಯದ ಎಲ್ಲಾ ಸಹಕಾರ ಬ್ಯಾಂಕುಗಳಿಗೆ ಬಾಕಿ ಇರುವ ಬಡ್ಡಿ ಹಣ ಬಿಡುಗಡೆ ಮಾಡದಿದ್ದಲ್ಲಿ ಬ್ಯಾಂಕ್ಗಳು ಒಡೆತಕ್ಕೆ ಸಿಲುಕಲಿವೆ ಎಂದು ತಿಳಿಸಿದರು.
ಈಗ ಹೆಣ್ಣು ಮಕ್ಕಳಿಗೆ ವಿತರಿಸುತ್ತಿರುವ ಸಾಲದಿಂದ ಮಳೆಯಾಶ್ರಿತ ಮುಂಗಾರು ಬೆಳೆಗಳಾದ ನೆಲಗಡಲೆ, ತೊಗರಿ, ಸೇರಿದಂತೆ ಎಲ್ಲಾ ಬಿತ್ತನೆ ಕಾರ್ಯ ಮಾಡಿಕೊಳ್ಳಲು ಪೂರ್ಣಸಹಕಾರಿಯಾಗಿದೆ. ಆದ್ದರಿಂದ ಎಲ್ಲಾ ರೈತ ಕುಟುಂಬಗಳು ಬಿತ್ತನೆಗಾಗಿ ಸಾಲ ಮಾಡುವುದು ತಪ್ಪಿದಂತಾಗುತ್ತದೆ. ಆದ್ದರಿಂದ ಸಾಲ ಪಡೆದ ಪ್ರತಿಯೊಬ್ಬರು ಡಿ.ಸಿ.ಸಿ. ಬ್ಯಾಂಕ್ನ್ನು ರೈತರ ಹಾಗೂ ಹೆಣ್ಣು ಮಕ್ಕಳ ಕಾಮದೇನು ಎಂದು ಭಾವಿಸಿ ಮರುಪಾವತಿಯನ್ನು ಎಂದಿನಂತೆ ಮಾಡಿ ಸಹಕರಿಸಿ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ರಮೇಶ್ಕುಮಾರ್ರವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ತುರ್ತುಕರೆ ಬಂದ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಸಾಲ ವಿತರಿಸಿ ದಿಢೀರ್ ತೆರಳಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಬಿ.ವಿ. ವೆಂಕಟರೆಡ್ಡಿ, ಲಕ್ಷ್ಮೀಪುರ ವಿ.ಎಸ್.ಎಸ್. ಅಧ್ಯಕ್ಷ ಬೋರ್ವೆಲ್ ಕೃಷ್ಣಾರೆಡ್ಡಿ, ಯಲ್ದೂರು ವಿ.ಎಸ್.ಎಸ್. ಅಧ್ಯಕ್ಷ ನಾರಾಯಣಸ್ವಾಮಿ, ಗೌನಿಪಲ್ಲಿ ವಿ.ಎಸ್.ಎಸ್. ಅಧ್ಯಕ್ಷ ಸತ್ಯನಾರಾಯಣ, ಮುಖಂಡ ಅಮರನಾಥರೆಡ್ಡಿ, ಕಾರ್ಯನಿರ್ವಾಹಣಾಧಿಕಾರಿಗಳಾದ ಈರಪ್ಪರೆಡ್ಡಿ, ಪ್ರಭಾಕರರೆಡ್ಡಿ, ಶಿವಾರೆಡ್ಡಿ, ಇತರರು ಇದ್ದರು.