ಪೊಳಲಿ ಕಲ್ಲಂಗಡಿ ಬೆಳೆಗಾರರ ವೇದನೆ
ಕೈಕಂಬ : ಕೊರೊನಾದಿಂದ ತರಕಾರಿ, ಹಣ್ಣುಗಳ ಬೆಳೆಗಾರರು ಸಂಪೂರ್ಣ ಕಂಗೆಟ್ಟಿದ್ದಾರೆ. ಮಾರುಕಟ್ಟೆಗಳಿಗೆ ಸಾಗಾಟ ಮಾಡಲಾಗದೆ ದ್ರಾಕ್ಷಿ, ಮಾವು, ಫರಂಗಿಹಣ್ಣು ಟೊಮಾಟೋ ದಂತಹ ಲಕ್ಷಾಂತರ ರೂಪಾಯಿ ಬೆಳೆಬಾಳುವ ಲಾರಿಗಟ್ಟಲೆ ಸೊತ್ತುಗಳು ರಸ್ತೆಗೆ ಎಸೆಯಲ್ಪಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದ್ದು, ಕಲ್ಲು ಹೃದಯವೂ ಕರಗುವಂತಿದೆ.
ರಾಜ್ಯದ ಇತರೆಡೆಯಲ್ಲಿ ಮಾಗಿದ ಹಣ್ಣುಗಳು ಕೊಳೆಯಲಾರಂಭಿಸಿದರೆ, ಪೊಳಲಿ ದೇವಸ್ಥಾನದಲ್ಲಿ ನಡೆಯುವ ತಿಂಗಳ ಜಾತ್ರೆಯಲ್ಲಿ ಮಾರಾಟ ಮಾಡಲೆಂದೇ ಸ್ಥಳೀಯ ಮಳಲಿ, ಪೊಳಲಿ, ಕರಿಯಂಗಳ, ಅಮ್ಮುಂಜೆ, ಸಾದೂರು, ಅಡ್ಡೂರು ಮೊದಲಾದ ಕಡೆಗಳಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ಎಕ್ರೆಗಟ್ಟಲೆ ಜಾಗದಲ್ಲಿ ಬೆಳೆಯಲಾದ(ಅಂದಾಜು 20 ಲಕ್ಷ) ಕಲ್ಲಂಗಡಿ(ಬಚ್ಚಂಗಾಯಿ) ಸಂಪೂರ್ಣ ನಷ್ಟದ ಹಾದಿ ಹಿಡಿದಿದೆ.
ಪೊಳಲಿ ವ್ಯಾಪ್ತಿ ಪ್ರದೇಶದಲ್ಲಿ ಈಗ ಕಲ್ಲಂಗಡಿ ಕೊಯ್ಯುವ ಕಾಲ. ಪೊಳಲಿ ಜಾತ್ರೆ ಸ್ಥಗಿತಗೊಂಡಿರುವುದರಿಂದ ಕಲ್ಲಂಗಡಿಗೆ ಬೆಲೆ ಇಲ್ಲದಂತಾಗಿ, ರೈತರು ತಲೆ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ. ಈ ಭಾಗದಲ್ಲಿ ಬೆಳೆಯಲಾಗುವ ಬಹುತೇಕ ಎಲ್ಲ ಕಲ್ಲಂಗಡಿ ಪೊಳಲಿ ಜಾತ್ರೆಯಲ್ಲೇ ಮಾರಾಟವಾಗಿ, ಉಳಿದ ಒಂದಷ್ಟು ಹಣ್ಣುಗಳು ಜಾತ್ರೆಯ ಬಳಿಕ ಸ್ಥಳೀಯ ಅಂಗಡಿಗಳಿಗೆ ಮಾರುವುದು ವಾಡಿಕೆ. ಈ ಬಾರಿ ಕರೋನಾ ಭೀತಿಯಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕಲ್ಲಂಗಡಿ ಕೊಳ್ಳುವವರಿಲ್ಲದೆ ಗದ್ದೆಗಳಲ್ಲೇ ಕೊಳೆಯುವಂತಾಗಿದೆ ಎಂದು ಮಳಲಿ, ಪೊಳಲಿ ಭಾಗದ ಹೆಚ್ಚಿನವರು ಎಕ್ರೆಗಟ್ಟಲೆ ಕಲ್ಲಂಗಡಿ ಬೆಳೆಸಿರುವ ಕೃಷಿಕರಾದ ನಾರಾಯಣ ಪೂಜಾರಿ, ನಾಗೇಶ್ ಮಾಯ, ಲೋಕೇಶ್ ಮಾಯ, ಅಣ್ಣು ಮೂಲ್ಯ, ಶೇಖರ್ ಅವಲತ್ತು ಕೊಂಡಿದ್ದಾರೆ.
“ನಾವೀಗ ಮನೆಗೆ ಬಂದವರಿಗೆ ಕಡಿಮೆ ದರದಲ್ಲಿ ಕಲ್ಲಂಗಡಿ ಮಾರಾಟ ಮಾಡುತ್ತಿದ್ದೇವೆ. ಇಲ್ಲಿನ ರೈತರು ಪೊಳಲಿ ಜಾತ್ರೆಗೆಂದೇ ದೇವರ ಪ್ರಸಾದವಾಗಿ ಕಲ್ಲಂಗಡಿ ಬೆಳೆದು ಮಾರಾಟ ಮಾಡುವುದು ರೂಢಿ. ನಮ್ಮ ನಷ್ಟಕ್ಕೆ ಸರ್ಕಾರ ಪರಿಹಾರ ನೀಡುವುದೇ ಅಥವಾ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಮಾಡುವುದೇ ?” ಎಂದು ಮಳಲಿಯಲ್ಲಿ ಸುಮಾರು 10 ಎಕ್ರೆ ಜಾಗದಲ್ಲಿ ಕಲ್ಲಂಗಡಿ ಬೆಳೆದಿರುವ ಬಡಪಾಯಿ ಕೃಷಿಕರಾದ ರಾಮಚಂದ್ರ ಸಪಲಿಗ, ನಾರಾಯಣ ಕುಲಾಲ್, ಡೊಂಬ ಹರಿಜನ, ಯಶವಂತ ಪೂಜಾರಿ, ರುಕ್ಮಯ ಪೂಜಾರಿ, ಶೇಖರ ಪೂಜಾರಿ ಕುರ್ವೆಮಾರ್, ಭೋಜ ಶೆಟ್ಟಿ ಪ್ರಶ್ನಿಸಿದ್ದಾರೆ.