ಕೊರೊನಾ ಮಹಾಮಾರಿ ಓಡಿಸಲು ತುಳುನಾಡ ದೈವಗಳಿಗೆ ಮೊರೆ ಇಟ್ಟ ವೀಡಿಯೋ ವೈರಲ್
ಕೈಕಂಬ: ವಿಶ್ವದೆಲ್ಲೆಡೆ ಈಗ ಕೊರೋನಾ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿದ್ದು, ಜೀವಸಂಕುಲ ಭೀತಿಯಿಂದ ದಿನಗಳೆಯುವಂತಾಗಿದೆ. ಒಂದೆಡೆ ರೋಗದ ಬಗ್ಗೆ ವಿಭಿನ್ನ ರೀತಿಯಲ್ಲಿ ಜನಜಾಗೃತಿ ಮೂಡಿಸುವಂತಹ ವೀಡಿಯೋ, ಆಡಿಯೋಗಳು ಪ್ರಕಟಗೊಳ್ಳುತ್ತಿದ್ದರೆ, ಇನ್ನೊಂದೆಡೆ ಪ್ರಸಕ್ತ ಸಂದಿಗ್ಧ ಪರಿಸ್ಥಿತಿಯಲ್ಲೂ ಕೆಲವರು ವಾಟ್ಸಾಪ್ ಸಂದೇಶಗಳಲ್ಲಿ `ಅಪಹಾಸ್ಯ’ಕ್ಕೆ ಒಂದಷ್ಟು ಕಾಲ ಮೀಸಲಿರಿಸಿರುವ ದುರಂತ ಸನ್ನಿವೇಶಗಳು ವ್ಯಕ್ತವಾಗುತ್ತಿವೆ.
ಅದೇನೇ ಇದ್ದರೂ ಗುರುಪುರದ ನಿವಾಸಿ, ಮಂಗಳೂರಿನ ಪ್ರಸಿದ್ಧ ಕಾರ್ಯಕ್ರಮ ನಿರೂಪಕ `ಸ್ವರ ಮನ್ಮಥ’ ಖ್ಯಾತಿಯ ವೀಜೆ ಮಧುರಾಜ್ ಧ್ವನಿಯಲ್ಲಿ ಕೊರೋನಾ ನಿವಾರಣೆಗಾಗಿ ತುಳುನಾಡಿನ ದೈವಗಳಿಗೆ ಮೊರೆ ಹೋಗಿರುವ `ನುಡಿ’ ಸಂದೇಶ ವಿಶಿಷ್ಠ ಹಾಗೂ ಅರ್ಥಪೂರ್ಣವಾಗಿದೆ.
ಈ ವೀಡಿಯೋ ಕಳೆದೆರಡು ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಲ್ಲದೆ, ಐದು ಸಾವಿರಕ್ಕೂ ಅಧಿಕ ಮಂದಿ ವೀಡಿಯೋ ಹಂಚಿಕೊಂಡಿದ್ದಾರೆ. `ಮೌನ ಕೋಗಿಲೆ’ ಖ್ಯಾತಿಯ ಕಿಶೋರ್ ಎಕ್ಕಾರ್ ಸಾಹಿತ್ಯ ರಚಿಸಿದ್ದು, ಭರತ್ ಗುರುಪುರ ಸಂಕಲಿಸಿದ್ದಾರೆ. ತುಳುನಾಡಿನ ಜನಸಾಮಾನ್ಯರಿಂದ ಹಿಡಿದು ಕೆಲವು ತುಳು ವಿದ್ವಾಂಸರೂ ಈ ವೀಡಿಯೋ ಮೆಚ್ಚಿಕೊಂಡಿದ್ದಾರೆ.