63 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ
ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ ಹಾಗೂ ವೆಸ್ಟರ್ನ್ ಸಂಸ್ಥೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕೇಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಒಟ್ಟು 63 ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಬಿ.ಸಿ.ರೋಡಿನ ಪೋಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಿದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಕಾನ್ ರ್ಯೂ ಆರ್.ವಿ.ಟೈಗರ್ ಸ್ಪೋರ್ಟ್ಸ್ ಕರಾಟೆ ಕರ್ನಾಟಕ ಸಂಸ್ಥೆಯ ಸಹ ತರಬೇತಿ ಕೇಂದ್ರ ವಾದ ಬಿ.ಸಿ.ರೋಡಿನ ಶ್ರೀ ಅನ್ನಪೂರ್ಣೇಶ್ವರಿ ಕರಾಟೆ ಟ್ರೈನಿಂಗ್ ಸೆಂಟರ್ ನ 63 ವಿದ್ಯಾರ್ಥಿಗಳು ಭಾಗವಹಸಿ ವಿವಿಧ ವಿಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ವಿಜೇತ 63 ವಿದ್ಯಾರ್ಥಿ ಗಳಿಗೆ ಕರಾಟೆಯ ರಾಷ್ಟ್ರೀಯ ತೀರ್ಪುಗಾರರಾದ ಶಿಹಾನ್ ವಸಂತ್ ಕೆ.ಬಂಗೇರ ಪಾರೆಂಕಿ ತರಬೇತಿ ನೀಡಿದ್ದಾರೆ.
ಬಹುಮಾನ ವಿಜೇತ ಅಭಿನಂದನೆ ಸಲ್ಲಿಸಿ ಮಾತನಾಡಿದ ಉದ್ಯಮಿ ನಾಗೇಂದ್ರ ಬಾಳಿಗಾ ಅವರು ಭಾರತೀಯ ಕ್ರೀಡೆಯಾಗಲಿ ಪಾಶ್ಚಾತ್ಯ ಕ್ರೀಡೆಯಾಗಲಿ ಅದರಲ್ಲಿ ಮುಖ್ಯ ವಾಗಿ ಬೇಕಾಗಿರುವುದು ಮಾನಸಿಕ ಸದೃಡತೆ, ದೈರ್ಯ, ಶೃದ್ದೆ, ಏಕಾಗ್ರತೆ , ಕಲಿಯುವ ಹುಮ್ಮಸ್ಸು ಅತೀ ಅಗತ್ಯ ಎಂದರು.ಕ್ರೀಡಾ ಪಟುಗಳು ಆರೋಗ್ಯವನ್ನು ಕಾಪಾಡುವುದು ಪ್ರಾಮುಖ್ಯವಾಗಿದ್ದು, ಹಿತ, ಮಿತವಾದ ಆಹಾರವನ್ನು ಕ್ಲಪ್ತ ಸಮಯದಲ್ಲಿ ಪಡೆಯುವುದು ಅಷ್ಟೇ ಪ್ರಮುಖ. ವ್ಯಾಯಾಮದಿಂದ ಪ್ರತಿಯೊಬ್ಬರ ಆರೋಗ್ಯ ಕಾಪಾಡಬಹುದು ಎಂದು ಸಲಹೆ ನೀಡಿದರು. ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನ ದ ಆಡಳಿತ ಮೋಕ್ತೇಸರ ಸೇಸಪ್ಪ ಕೋಟ್ಯಾನ್, ಉದ್ಯಮಿಗಳಾದ ಸಂದೀಪ್ ಬಂಟ್ವಾಳ, ಹೇಮಂತ್ ಹಾಗೂ ಪೋಷಕರು ಉಪಸ್ಥಿತರಿದ್ದರು.