ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ಸಾಧಕ ವಿದ್ಯಾರ್ಥಿ ಮದನ್ಗೆ ಸಮ್ಮಾನ
ಮೂಡುಬಿದಿರೆ: ಶ್ರಮ ಏವ ಜಯತೆ ಎಂಬ ಮಾತಿನಂತೆ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸೂಕ್ತ ಮಾರ್ಗದರ್ಶನದಲ್ಲಿ ಉತ್ಕøಷ್ಟ ಪ್ರಯತ್ನ ಮಾಡಿದರೆ ಯಶಸ್ಸು ಖಂಡಿತ ಎಂಬುದಕ್ಕೆ ಸಾಧಕ ವಿದ್ಯಾರ್ಥಿ ಮದನ್ ವೈ ಎನ್ ಅವರೇ ಸಾಕ್ಷಿ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು.
ಎಕ್ಸಲೆಂಟ್ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮದನ್ ವೈ ಎನ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ನಡೆದ ರಾಷ್ಟ್ರಮಟ್ಟದ ಕೆವಿಪಿವೈ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದು ನಂತರ ಇತ್ತೀಚೆಗಷ್ಟೇ ನಡೆದ ಸಂದರ್ಶನದಲ್ಲಿ ಪಾಲ್ಗೊಂಡು ರಾಷ್ಟ್ರಮಟ್ಟದಲ್ಲಿ 51ನೇ ರ್ಯಾಂಕ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದು, ಕಾಲೇಜಿನಲ್ಲಿ ಅಭಿನಂದಿಸಲಾಯಿತು.
9ನೇ ತರಗತಿಯಲ್ಲಿಯೇ ವಿಜ್ಞಾನಿಯಾಗಬೇಕೆಂಬ ಕನಸನ್ನು ಹೊತ್ತು ಸತತ ಪರಿಶ್ರಮದಿಂದ ಒಂದೊಂದೇ ಮೆಟ್ಟಿಲೇರುತ್ತಾ ಈ ಹಂತವನ್ನು ತಲುಪಿದ್ದಾನೆ. ವಿದ್ಯಾರ್ಥಿಯ ಈ ಸಾಧನೆ ಸಂಸ್ಥೆಗೆ ಹೆಮ್ಮೆಯನ್ನು ತಂದಿದ್ದು ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯನ್ನು ನೀಡಿದೆ. ಸಂಸ್ಥೆಯು ಬೇಸಿಕ್ ಸೈನ್ಸ್ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಮದನ್ ಅವರ ಈ ವಿಶಿಷ್ಟ ಸಾಧನೆಯನ್ನು ಪ್ರೋತ್ಸಾಹಿಸಲು ಸಂಸ್ಥೆಯು ಒಂದು ಲಕ್ಷ ರೂಪಾಯಿ ನಗದು ಪುರಸ್ಕಾರವನ್ನು ಯುವರಾಜ್ ಜೈನ್ ಘೋಷಿಸಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಧ್ಯಾಪಕ ಡಾ. ಪ್ರಶಾಂತ್ ಹೆಗ್ಡೆ, ರವೀಂದ್ರನಾಥ್ ಬರ್ವೆ, ದಯಾನಂದ, ಕೇಶವಮೂರ್ತಿ ಉಪಸ್ಥಿತರಿದ್ದರು.