ಹಳೆಯಂಗಡಿ ಪಂಚಾಯತ್ ಎದುರುಗಡೆ ಬಿಜೆಪಿಯಿಂದ ಪ್ರತಿಭಟನೆ
ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರ ದುರ್ವರ್ತನೆ, ದೂರು ನೀಡಲು ಹೋಗುವ ಸ್ಥಳೀಯರ ವಿರುದ್ದ ಜಾತಿ ನಿಂದನೆ ಮಾಡುವ ಕುರಿತು ದೂರು ನೀಡುವ ಬಗ್ಗೆ, ಅಭಿವೃದ್ದಿಯಲ್ಲಿ ತಾರತಮ್ಯ ಮಾಡುತ್ತಿರುವ ಮತ್ತಿತರ ವಿಷಯಗಳ ಬಗ್ಗೆ ಶನಿವಾರದಂದು ಭಾರತೀಯ ಜನತಾ ಪಕ್ಷದ ಹಳೆಯಂಗಡಿಯ ನಗರ ಸಮಿತಿಯ ನೇತ್ರತ್ವದಲ್ಲಿ ಹಳೆಯಂಗಡಿ ಪಂಚಾಯತ್ ಎದುರುಗಡೆ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೊಳ್ಳೂರು ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಜಲಜ ಪಾಣರ್ ರವರು ಗ್ರಾಮಸ್ತರು ದೂರುಗಳನ್ನು ನೀಡಲು ಹೋದಾಗ ಸರಿಯಾಗಿ ಸ್ಪಂದಿಸುತ್ತಿಲ್ಲ. ಬದಲಾಗಿ ಅವರನ್ನು ನಿಂದಿಸಲಾಗುತ್ತಿದೆ. ದೂರುದಾರರು ನ್ಯಾಯಯುತವಾಗಿ ಮಾತನಾಡಿದಾಗ ಜಾತಿ ನಿಂದನೆ ದೂರು ದಾಖಲಿಸುತ್ತಾರೆ. ಈಗಾಗಲೇ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಖಾಸಿಂ ಸಾಹೇಬ್, ರಮೇಶ್ ಅಂಚನ್ ಸೇರಿದಂತೆ ಹಲವರ ಮೇಲೆ ಸುಳ್ಳು ಕೇಸು ದಾಖಲಿಸಿದ್ದಾರೆ.
ಮಂಗಳೂರು ತಾಲೂಕಿನಲ್ಲಿ 1 ಕೋಟಿಗೂ ಮಿಕ್ಕಿ ಆದಾಯವನ್ನು ಹೊಂದಿರುವ ಮೂರು ಗ್ರಾಮ ಪಂಚಾಯತ್ಗಳಾದ ಬಜಪೆ, ಕಿನ್ನಿಗೋಳಿ, ಹಳೆಯಂಗಡಿಗಳಲ್ಲಿ ಹಳೆಯಂಗಡಿ ಪಂಚಾಯತ್ ಕೂಡ ಇದ್ದು ಆದರೆ ಅಭಿವೃದ್ದಿ ಕುಂಠಿತಗೊಂಡಿದೆ. ಕೇವಲ ಕಾಂಗ್ರೇಸ್ ಬೆಂಬಲಿತ ಸದಸ್ಯರಿರುವ ವಾರ್ಡ್ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಉಳಿದ ವಾರ್ಡ್ಗಳನ್ನು ಕಡೆಗಣಿಸಲಾಗುತ್ತಿದೆ. ಪಂಚಾಯತ್ನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅಲ್ಲದೇ ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆಯವರು ತಮ್ಮ ವರ್ತನೆಯನ್ನು ಬದಲಿಸಬೇಕು, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆಗೆ ಆಗಮಿಸಿದ ಶಾಸಕ ಉಮಾನಾಥ ಕೋಟ್ಯಾನ್ ಅವರಲ್ಲಿ ಮನವಿಯನ್ನು ಸಲ್ಲಿಸಿದರು. ಪ್ರತಿಕ್ರಿಯಿಸಿದ ಶಾಸಕರು, ಅಧ್ಯಕ್ಷ ಸ್ಥಾನ ಸಮುದಾಯಕ್ಕೆ ಸಿಕ್ಕ ಗೌರವ ಎಂದು ಭಾವಿಸಿ ಅಧಿಕಾರ ಚಲಾಯಿಸಬೇಕು, ಅಧಿಕಾರದ ದುರ್ಬಳಕೆ ಮಾಡಬಾರದು. ನ್ಯಾಯಕ್ಕೆ ಬೆಲೆಕೊಡಬೇಕು. ಸುಳ್ಳು ಕೇಸು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಎಸಿಪಿ ಮೂಲಕ ಸೂಕ್ತ ತನಿಖೆ ನಡೆಸಲಾಗುವುದು. ಜನಪ್ರತಿನಿಧಿಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು, ಯಾರಿಗೂ ಅಧಿಕಾರ ಶಾಶ್ವತವಲ್ಲ. ಮುಂದಿನ ದಿನಗಳಲ್ಲಿ ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ತಮ್ಮ ವರ್ತನೆಯನ್ನು ಬದಲಾಯಿಸಿ ಉತ್ತಮ ಆಡಳಿತ ನೀಡಬಹುದೆಂಬ ಆಶಾ ಭಾವನೆಯನ್ನು ಹೊಂದಿದ್ದೇನೆ ಎಂದು ಹೇಳಿದರು.
ಈ ಆರೋಪದ ಕುರಿತು ಪಣಂಬೂರು ಎಸಿಪಿ ರಾಜೇಂದ್ರ ಅವರಿಗೂ ಮನವಿಯನ್ನು ಸಲ್ಲಿಸಲಾಯಿತು. ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಶೋಭೇಂದ್ರ ಸಸಿಹಿತ್ಲು, ನರೇಂದ್ರ ಪ್ರಭು, ಸದಾಶಿವ ಇಂದಿರಾನಗರ, ಚಿತ್ರಾ ಸುಕೇಶ್, ಅಶೋಕ್ ಬಂಗೇರ, ಎಸ್.ಎಸ್.ಸತೀಶ್ ಭಟ್ ಮತ್ತಿತರರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ದಿವಾಕರ ಕರ್ಕೇರ, ರಶ್ಮಿ ಆಚಾರ್ಯ, ಶರತ್ ಕುಬೆವೂರು, ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಸುಖೇಶ್ ಪಾವಂಜೆ, ಪಡುಪಣಂಬೂರು ಪಂಚಾಯಿತಿಯ ಮಂಜುಳಾ, ಹಳೆಯಂಗಡಿ ಪಂಚಾಯಿತಿಯ ವಿನೋದ್ಕುಮಾರ್ ಕೊಳುವೈಲು, ಸುಗಂಧಿ, ಬೇಬಿ ಸುಲೋಚನ, ಜಯಂತಿ, ಬಿಜೆಪಿಯ ಸದಾಶಿವ ಅಂಚನ್ ಚಿಲಿಂಬಿ, ಸಂತೋಷ್ ಆರ್. ಶೆಟ್ಟಿ, ಮನೋಜ್ಕುಮಾರ್, ಹಿಮಕರ್, ಕೃಷ್ಣಪ್ಪ, ರಾಮಚಂದ್ರ ಶೆಣೈ, ಹರೀಶ್, ಅನಿಲ್ ಕುಂದರ್, ಆನಂದ ಸುವರ್ಣ, ಶಂಕರ ಬಂಗೇರ, ಉದಯ ಸುವರ್ಣ, ವಾಸುದೇವ ಸಾಲ್ಯಾನ್, ಶೇಖರ್ ದೇವಾಡಿಗ, ಸುನಿಲ್ ಪಾವಂಜೆ, ದೇವದಾಸ್, ಶಶಿ, ಸಾವಿತ್ರಿ, ಸುಲೋಚನ ಮತ್ತಿತರರು ಉಪಸ್ಥಿತರಿದ್ದರು.
ಈ ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಘರ್ಷಣೆಯಾಗದಂತೆ ಮೂಲ್ಕಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು,