ಹಿರಿಯಡಕ ದೇವಸ್ಥಾನಕ್ಕೆ ಡಾ. ವೀರೇಂದ್ರ ಹೆಗ್ಗಡೆ ಭೇಟಿ
ಹೆಬ್ರಿ: ಇಲ್ಲಿನ ಹಿರಿಯಡಕ ದೇವಸ್ಥಾನದಲ್ಲಿ ನಡೆಯುತ್ತಿರುವ ನವೀಕೃತ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ದೇಗುಲಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಭೇಟಿ ನೀಡಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಸಿ ಮಾತನಾಡಿದ ಅವರು, ಯುವಪೀಳಿಗೆ ಧಾರ್ಮಿಕ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆಕರ್ಷಕ ಕೆತ್ತನೆಗಳಿಂದ ದಾರುಶಿಲ್ಪ ಹಾಗೂ ಶಿಲ್ಪಕಲೆ ಇಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಇದರ ಹಿಂದಿರುವ ಶ್ರಮ ಪ್ರಶಂಸನೀಯ. ಹಿರಿಯಡಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಗೊಂಡು ಅತ್ಯುತ್ತಮವಾಗಿ ನಿರ್ಮಾಣಗೊಂಡಿದೆ.ಅಲ್ಲದೆ, ಧಾರ್ಮಿಕ ಪ್ರವಾಸಿ ತಾಣವಾಗಿ ಮೂಡಿಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಗೋವರ್ಧನದಾಸ ಹೆಗ್ಡೆ, ಕಾರ್ಯದರ್ಶಿ ಅಮರನಾಥ ಆರ್. ಶೆಟ್ಟಿ, ಅರ್ಚಕ ರಂಗನಾಥ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ: ದೇವಸ್ಥಾನ ನಿರ್ಮಾಣದ ಶಿಲ್ಪಿ ರಾಜು ಎಚ್. ನಾಯ್ಕ, ಪ್ರಾಜೆಕ್ಟ್ ಕನ್ಸಲ್ಟೆಂಟ್ ಪ್ರಸಾದ್ ಶೆಟ್ಟಿ, ದಾರುಶಿಲ್ಪಿ ನಾರಾಯಣ ಆಚಾರ್ಯ, ಹರೀಶ್ ಆಚಾರ್ಯ, ಹರೀಶ್ ಶೆಟ್ಟಿ ಹಾಗೂ ಧರ್ಮಸ್ಥಳ ಗ್ರಾ. ಯೋಜನೆಯ ಹಿರಿಯಡಕ ಘಟಕದ ವತಿಯಿಂದ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಲಾಯಿತು.