ಸೊಂಟದ ಸ್ವಾಧಿನ ಕಳೆದುಕೊಂಡು, ಅನಾಥಾಲಯದಲ್ಲಿ ಆಶ್ರಯ ಪಡೆದಿರುವ, ಯುವಕನ ನೆರವಿಗೆ ಸಮಾಜ ಸ್ಪಂದಿಸ ಬೇಕಾಗಿದೆ…!!
ಉಡುಪಿ : ಸೊಂಟದ ಸ್ವಾಧಿನ ಕಳೆದುಕೊಂಡಿರುವ ಯುವಕನೊರ್ವ ಬೀದಿಯಲ್ಲಿ ತೆವಳುತ್ತ ಭಿಕ್ಷೆ ಎತ್ತಿಕೊಂಡು ಚಿಂತಾಜನಕವಾಗಿ ಬದುಕು ಸಾಗಿಸುತ್ತಿರುವುದನ್ನು ಕಂಡ, ದಯಾಗುಣದ ಪುಣ್ಯಾತ್ಮರು ಆತನ ರಕ್ಷಿಸಿ ಬ್ರಹ್ಮಾವರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಅಪ್ಪ-ಅಮ್ಮ’ ಅನಾಥಾಲಯದಲ್ಲಿ ಕೆಲವು ತಿಂಗಳುಗಳ ಹಿಂದೆ ನೆಲೆ ಕಲ್ಪಿಸಿದ್ದರು. ಅನಾಥಾಲಯ ಸಂಚಾಲಕ ಪ್ರಶಾಂತ ಪೂಜಾರಿ ಅವರು ನೆಲದಿಂದ ಎದ್ದೇಳಲಾಗದೆ, ಶೌಚಾದಿಗಳನ್ನು ಸ್ಥಳದಲ್ಲಿ ಮಾಡುತ್ತಿದ್ದ ಯುವಕನಿಗೆ ಚಿಕಿತ್ಸೆಗೆ ಕೊಡಿಸಲು ನೆರವಾಗುವಂತೆ, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಲ್ಲಿ ವಿನಂತಿಸಿಕೊಂಡರು. ತಕ್ಷಣ ಸ್ಪಂದಿಸಿದ ವಿಶು ಶೆಟ್ಟಿ ಅವರು ಯುವಕನ ಅಂಬಲಪಾಡಿಯ ಹೈಟೆಕ್ ಆಸ್ಪತ್ರೆಯಲ್ಲಿ ದೈಹಿಕ ತಪಾಸಣೆಗೆ ಒಳಪಡಿಸಿದರು.
ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರಿಂದ ಯುವಕನ ಎಡಕಾಲಿನ ಸೊಂಟದ ಕೀಲು ಮುರಿದು ಎರಡು ವರ್ಷಕ್ಕೂ ಅಧಿಕ ಸಮಯ ಕಳೆದಿದೆ. ಜೊತೆಗೆ ಕಾಲಿನ ಗಂಟಿಗೂ ಸಮಸ್ಯೆ ಎದುರಾಗಿದೆ. ಶಸ್ತ್ರಚಿಕಿತ್ಸೆ ನಡೆಸುವುದರ ಮೂಲಕ ಕೃತಕ ಕೀಲು ಜೋಡಣೆ ನಡೆಸಬೇಕು. ಒಟ್ಟು ಚಿಕಿತ್ಸಾ ವೆಚ್ಚ 2 ರಿಂದ 2.50 ಲಕ್ಷದ ವರೆಗೆ ತಗಲಬಹುದೆಂದು ಹೇಳಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ಅನಾಥಾಲಯದ ಸಂಚಾಲಕರಿಗೆ ಭರಿಸಲು ಸಾಧ್ಯವಿಲ್ಲ. ಅವರೇ ದಾನಿಗಳ ನೆರವಿನ ಮೂಲಕ ನಿರ್ಗತಿಕರು ಅನಾಥರನ್ನು ಅನಾಥಪ್ರಜ್ಞೆ ಕಾಡದಂತೆ ಸಲಹುತ್ತಿದ್ದಾರೆ. ಸಹೃದಯಿ ದಾನಿಗಳು, ಸಮಾಜದ ಸಂಘ ಸಂಸ್ಥೆಗಳು, ಮಠ- ಮಂದಿರಗಳು, ಜನಪ್ರತಿನಿಧಿಗಳು, ನಾಗರಿಕ ಸಮಾಜ ಯುವಕನ ಅಂದಕಾರದ ಬದುಕಿನಲ್ಲಿ ಪ್ರಕಾಶ ಬೀರಬೇಕಾಗಿದೆ. ನೊಂದ ಮನಸ್ಸಿಗೆ ಆನಂದ ಮೂಡಿಸಬೇಕಾಗಿದೆ. ಈ ಮೂಲಕ ಅಭಿನಂದನರ್ಹರು ಎಂದೆನಿಸಿ ಕೊಳ್ಳಬೇಕಿದೆ.
ಗಾಯಾಳು ರೋಗಿಯು ತನ್ನ ಹೆಸರು ಸತೀಶ್ ಶೆಟ್ಟಿ (40ವ), ತಾನು ಬಂಟ ಸಮಾಜದವನು. ತಂದೆ ಲೋಕಯ್ಯ ಶೆಟ್ಟಿ, ತಾಯಿ ವಸಂತಿ ಶೆಟ್ಟಿ ಇರ್ವರು ಮೃತಪಟ್ಟಿದ್ದಾರೆ. ಗುರುಪುರ, ಪೊಳಲಿ- ಚೆಳ್ಳೂರುಗುತ್ತು ಮನೆಯ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ದಿಕ್ಕಿಲ್ಲದ ಅನಾಥ ಬದುಕು ನನ್ನದಾಗಿದೆ, ನಾಗರಿಕ ಸಮಾಜ ನನಗೆ ದಿಕ್ಕಾಗ ಬೇಕೆಂದು ಸತೀಶ್ ಶೆಟ್ಟಿ ಅಳಲನ್ನು ತೋಡಿಕೊಂಡಿದ್ದಾನೆ. ಸತೀಶ್ ಶೆಟ್ಟಿ ಅವರಿಗೆ ನೆರವು ನೀಡಲು ಮುಂದೆ ಬರುವ ಸಹೃದಯಿಗಳು ಬ್ರಹ್ಮಾವರ ಆಕಾಶವಾಣಿ ಬಳಿ ಇರುವ ‘ಅಪ್ಪ-ಅಮ್ಮ’ ಅನಾಥಾಲಯದ ಸಂಚಾಲಕ ಪ್ರಶಾಂತ್ ಪೂಜಾರಿ ಕೂರಾಡಿ (ಫೋ-9164765898,9986111989) ಅವರನ್ನು ಸಂಪರ್ಕಿಸುವಂತೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ವಿನಂತಿಸಿ ಕೊಂಡಿದ್ದಾರೆ.
ಸಿಂಡಿಕೆಟ್ ಬ್ಯಾಂಕ್ ನ ಖಾತೆ
ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ(ರಿ.)ಕೂರಾಡಿ
02103070000145, IFSC CODE:SYNB0000210 ಸಂಖ್ಯೆಗೆ ಜಮಾ* *ಮಾಡಬಹುದಾಗಿದೆ.