ಈಶ್ವರಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ್ ಕಾರ್ಯಕ್ರಮ
ಕೋಲಾರ:ಸಾರ್ವಜನಿಕರ ಶಾಂತಿ ನೆಮ್ಮದಿಗಾಗಿ ಪ್ರಜಾಪಿತ ಈಶ್ವರಿ ಬ್ರಹ್ಮ ಕುಮಾರಿ ಸಮಾಜವು ಜಿಲ್ಲೆಯಲ್ಲಿ ಅಧ್ಯಾತ್ಮಿಕತೆಯ ವಿಚಾರಧಾರೆಗಳ ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉನ್ನತವಾದ ಸ್ಥಾನವನ್ನು ಪಡೆದಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಅಭಿಪ್ರಾಯ ಪಟ್ಟರು. ನಗರದ ಈಶ್ವರಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವು ರಕ್ಷಾ ಬಂಧನ್ ಕಾರ್ಯಕ್ರಮವು ಅಣ್ಣ ತಂಗಿಯರ ಭಾಂದವ್ಯದ ಸಂಕೇತವಾಗಿದೆ. ತಂಗಿಯ ರಕ್ಷಣೆ ಅಣ್ಣನ ಜವಾಬ್ದಾರಿಯನ್ನು ನೆನಪಿಸುವ ಹಬ್ಬವಾಗಿದೆ. ಈ ಹಿಂದೆ ಮೌಂಟ್ ಅಭುವಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಕರೆದುಕೊಂಡು ಹೋಗಿದ್ದ ಸಂದರ್ಭವನ್ನು ನೆನಪಿಸಿ ಜ್ಞಾನಾಭಿವೃದ್ದಿಯ ವಿಚಾರಧಾರೆಗಳು, ಯೋಗ, ಪ್ರವಚನಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ಆಯೋಜಿಸಿ ಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರುಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ ಜೀವನದಲ್ಲಿ ಒಮ್ಮೆಯಾದರೂ ಮೌಂಟ್ ಅಭುವಿಗೆ ಹೋಗಲೇಬೇಕು. ಅಲ್ಲಿನ ವಾತವರಣ ಗಂಧರ್ವ ಲೋಕದ ಸ್ವರ್ಗದಂತ ಭಾವನೆ ವ್ಯಕ್ತವಾಗುತ್ತದೆ ಎಂದರು.
ಪ್ರಜಾಪಿತ ಈಶ್ವರಿ ಬ್ರಹ್ಮ ಕುಮಾರಿ ಸಮಾಜದಲ್ಲಿ ಅಧ್ಯಾತ್ಮಿಕತೆಯೊಂದಿಗೆ ಶಿಸ್ತು, ಸಂಸ್ಕಾರ, ಸಂಸ್ಕೃತಿಗಳನ್ನು ಕಲಿಸುವಂಥ ಮಾದರಿಯ ಸಂಸ್ಥೆಯಾಗಿದೆ. ಸಮಾಜದಲ್ಲಿ ಪ್ರತಿಯೊಬ್ಬರು ಹೇಗೆ ಬದುಕಬೇಕೆಂಬ ಜೀವನ ಮೌಲ್ಯದ ಪಾಠವನ್ನು ಬೋದಿಸಲಾಗುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಪ್ರಜಾಪಿತ ಈಶ್ವರಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮುಖ್ಯಸ್ಥ ಚಂದ್ರಶೇಖರ್ ಪ್ರಸ್ತಾವಿಕ ನುಡಿಗಳನ್ನಾಡಿ ಮೌಂಟ್ ಅಭುವಿಗೆ ಹಿರಿಯ ಪತ್ರಕರ್ತರಾದ ನಾರಾಯಣಸ್ವಾಮಿ, ಶಾಸಕ ಕೆ.ಆರ್. ಶ್ರೀನಿವಾಸಯ್ಯ, ನ್ಯಾಯಾದೀಶರಾದ ನಟರಾಜ್, ಪತ್ರಕರ್ತರಾದ ಪ್ರಹ್ಲಾದರಾವ್, ಪ್ರಭಾಕರ, ಭೃಂಗೀಶ್, ಇವರನ್ನು ಮೌಂಟ್ ಅಭುವಿಗೆ ಕರೆದುಕೊಂಡು ಹೋಗಿದ್ದ ಸಂದರ್ಭವನ್ನು ನೆನಪಿಸಿಕೊಂಡು ಹಿಂದಿನಿಂದ ಪತ್ರಕರ್ತರಿಗೂ ಬ್ರಹ್ಮಕುಮಾರಿ ಸಮಾಜಕ್ಕೂ ಇದ್ದ ಒಡನಾಟವನ್ನು ವಿವರಿಸಿದರು.
ಅಕ್ಟೋಬರ್ 6 ರಂದು ಮೌಂಟ್ ಅಭುವಿನಿಂದ ಸಂಪನ್ಮೂಲ ವ್ಯಕ್ತಿ ಮಹೇಶ್ ಅವರು ಅಗಮಿಸಲಿದ್ದು ಪತ್ರಕರ್ತರ ಭವನದಲ್ಲಿ ಹಿರಿಯ ನಾಗರೀಕರಿಗೆ ಕಾರ್ಯಕ್ರಮವನ್ನು ನಡೆಸಿ ಕೊಡಲಿದ್ದಾರೆಂದು ತಿಳಿಸಿದರು ಪ್ರಜಾಪಿತಾ ಈಶ್ವರಿ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಶಾಕುಂತಲಕ್ಕ ಮಾತನಾಡಿ ರಕ್ಷಾ ಬಂಧನ ಎಂಬುವುದು ಒಂದು ದಿನದ ಆಡಂಬರವಲ್ಲ. ದ್ವೇಷ, ಅಸೂಯೆಗಳನ್ನು ತೊರೆದು ಪರಸ್ಪರ ಸೌಹಾರ್ದತೆ ಸದ್ಬಾವನೆ ರೂಪಿತವಾಗಲು ರಾಖೀ ಹಬ್ಬವನ್ನು ವಿಶ್ವದ್ಯಾಂತ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಸತ್ಯಯುಗದಲ್ಲಿ ಲಕ್ಷ್ಮೀನಾರಾಯಣ ಸೇರಿದಂತೆ ದೇವತೆಗಳ ಆಡಳಿತದಲ್ಲಿ ವಿಶ್ವವು ಶಾಂತಿ ಸೌಹಾರ್ದತೆಯಿಂದ ಕೊಡಿತ್ತು. ನಂತರದಲ್ಲಿ ಬಂದ ಸಂಗಮ ಯುಗದಲ್ಲಿ ಮೌಲ್ಯಗಳು ನಶಿಸಿ ಹೋಗಿ ಹಿಂಸಾಚಾರಗಳು ಹೆಚ್ಚಾಗಿದೆ. ರಾತ್ರಿ ಕಳೆದ ಮೇಲೆ ಹಗಲು ಬರುವಂತೆ ಮುಂದಿನ ದಿನಗಳಲ್ಲಿ ಸತ್ಯ ಯುಗ ಬರಲಿದ್ದು ದುಖಃವು ಕಳೆದು ಸುಖದ ರಾಮ ರಾಜ್ಯವಾಗಲಿದೆ. ಭಾರತವು ಸಂಪನ್ನಭರಿತವನ್ನಾಗಿಸಲು ರಾಖಿಯಂತ ಹಬ್ಬಗಳು ಪೂರಕವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಕುಂತಲಕ್ಕೆ ಎಲ್ಲಾ ಪತ್ರಕರ್ತರಿಗೂ ರಾಖಿ ಕಟ್ಟಿ ಸಿಹಿ ಹಂಚಿದರು. ಈ ಸಂದರ್ಭದಲ್ಲಿ ಬಿ.ಕೆ.ನಾರಾಯಣಸ್ವಾಮಿ, ಬಿ.ಕೆ. ಪದ್ಮ ಹಾಗೂ ಬಿ.ಕೆ.ಗಿರಿಜ ಉಪಸ್ಥಿತರಿದ್ದರು