ಮೂಡುಬಿದಿರೆ ಯುವವಾಹಿನಿ ಪದಗ್ರಹಣ ಸಮಾರಂಭ
ಮೂಡುಬಿದಿರೆ: ಸಾಧನೆ ಮತ್ತು ತೃಪ್ತ ಜೀವನಕ್ಕೆ ರಾಜಕೀಯವೊಂದೆ ದಾರಿಯಲ್ಲ. ಶಿಕ್ಷಣ, ಉದ್ಯಮ, ಕಲೆ, ಕ್ರೀಡೆ, ಕೃಷಿ ಮೊದಲಾದ ನೂರು ದಾರಿಗಳಿವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬೀದಿಯಲ್ಲಿ ಹಾಲು-ಜೇನು ಹರಿಯುವುದು ಸಾಧ್ಯವಿಲ್ಲ. ರಾಜಕೀಯದಿಂದಲೆ ಉದ್ಧಾರ ಎಂಬುದು ಭ್ರಮೆ ಬೇಡ ಎಂದು ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್ ನುಡಿದರು.
ಅವರು ಮೂಡುಬಿದಿರೆ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಯುವವಾಹಿನಿ ಪದಗ್ರಹಣ ಮೂಡುಬಿದಿರೆಯ ಯುವವಾಹಿನಿ ಘಟಕದ ಪದಗ್ರಹಣ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸಮಾಜಕ್ಕೆ ಘೋರ ಸಿಟ್ಟಿಗಿಂತ ಸಾತ್ವಿಕ ಸಿಟ್ಟಿನ ಅಗತ್ಯವಿದೆ. ಬದಲಾವಣೆಗಿಂತ ಮನಪರಿವರ್ತನೆಯ ಕೆಲಸ ಆಗಬೇಕಾಗಿದೆ. ಜಗತ್ತಿನ ಯುದ್ಧಗಳನ್ನೇ ಮಾತುಕತೆಯ ಮೂಲಕ ತಪ್ಪಿಸಲಾಗುತ್ತದೆ. ಹಿರಿಯರು ಯುವ ಸಮುದಾಯಕ್ಕೆ ತಿಳಿ ಹೇಳಿ ಆರೋಗ್ಯಪೂರ್ಣ ಸಮಾಜ ನಿರ್ಮಿಸುವುದು ಎಲ್ಲಾ ಸೇವಾ ಕಾರ್ಯಗಳಿಗಿಂತಲೂ ತುರ್ತಿನ ಕೆಲಸ ಎಂದರು.
ಮೆಸ್ಕಾಂ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಯಾನಂದ ಎಂ ಮಾತನಾಡಿ, ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಸ್ವರೂಪದ ಸಂಘಟನೆಗಳು ಕುಟುಂಬ ಬಾಂಧವ್ಯವನ್ನು ಹಾಗೂ ಮಾನವ ಪ್ರೇಮವನ್ನು ಬತ್ತುವಂತೆ ಮಾಡಬಾರದು. ಆ ಸಂಘಟನೆಗಳಲ್ಲಿ ಸ್ವಾರ್ಥ ತುಂಬಿದರೆ ಸುಖಿ ಸಮಾಜ ನಿರ್ಮಾಣ ಅಸಾಧ್ಯ ಎಂದರು.
ಭಾನುಮತಿ ಶೀನಪ್ಪ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಮಂಗಳೂರು ನವೀನ್ ಚಂದ್ರ ಡಿ. ಸುವರ್ಣ, ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ ರವೀಂದ್ರ ಎಂ. ಸುವರ್ಣ ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ, ಮೂಡುಬಿದಿರೆ ಘಟಕದ ಸಲಹೆಗಾರ ಟಿ. ಶಂಕರ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲ್ ಪ್ರತಿಜ್ಞಾ ಬೋಧನೆಯನ್ನು ಮಾಡಿದರು.
ಯುವವಾಹಿನಿ ಮೂಡುಬಿದಿರೆ ನಿರ್ಗಮನ ಅಧ್ಯಕ್ಷ ರಾಜೇಶ್ ಡಿ. ಕೋಟ್ಯಾನ್ ಅಧ್ಯಕ್ಷತೆವಹಿಸಿದರು. ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ರಾಕೇಶ್ ಕುಮಾರ್ ಮೂಡುಕೋಡಿ, ಕಾಶಿಪಟ್ಣ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿ, ಮೂಡುಬಿದಿರೆ ಶ್ರೀ ನಾರಾಯಣಗುರು ಮಹಿಳಾ ಘಟಕ ಅಧ್ಯಕ್ಷೆ ಗೀತಾ ಸುಭಾಷ್ ಅಧ್ಯಕ್ಷರು, ಕಡಂದಲೆ-ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಸುಧಾಕರ ಪೂಜಾರಿ, ಕಲ್ಲಮುಂಡ್ಕೂರು
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಬೋರುಗುಡ್ಡೆ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ನಾರಾಯಣ ಪೂಜಾರಿ, ಬೈರೊಟ್ಟಿ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಎಲ್.ಎನ್. ಜಗದೀಶ್ಚಂದ್ರ ಡಿ.ಕೆ. ಮತ್ತು ಕಾರ್ಯದರ್ಶಿಯಾಗಿ ನವಾನಂದ ಇವರನ್ನು ಆಯ್ಕೆ ಮಾಡಲಾಯಿತು.
ಸಮಾರಂಭದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಟಿ.ಶಂಕರ್ ಸುವರ್ಣ, ಮೂಡುಬಿದಿರೆ ಘಟಕ ಸ್ಥಾಪನೆಗೆ ಶ್ರಮಿಸಿದ ರಾಕೇಶ್ ಕುಮಾರ್ ಮೂಡುಕೋಡಿ ಹಾಗೂ ಬಾಲಪ್ರತಿಭೆ ಸಿಂಚನಾ ಎಸ್.ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಆರ್ಥಿಕ ನೆರವು ಮಾರ್ನಾಡ್ ನಿವಾಸಿ ರಾಜೇಶ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ವೈಧ್ಯಕೀಯ ನೆರವು ಹಾಗೂ ಇರುವೈಲ್ನ ನಿವಾಸಿಯಾಗಿ ಸವಿತಾ ಅವರ ಮದುವೆಗಾಗಿ ಆರ್ಥಿಕ ನೆರವು ನೀಡಲಾಯಿತು.
ಕಾರ್ಯದರ್ಶಿ ರಾಮ್ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಡಾ. ಯೋಗೀಶ್ ಕೈರೋಡಿ, ಸೌಮ್ಯ ನಿರೂಪಿಸಿದರು.