ಪ್ರಗತಿ ಪರಿಶೀಲನಾ ಸಭೆ ಹಠಾತ್ ರದ್ದು
ಬಂಟ್ವಾಳ: ದ.ಕ.ಜಿಲ್ಲಾ ಉಸ್ತವಾರಿ ಸಚಿವ ಯು.ಟಿ.ಖಾದರ್ ಗುರುವಾರ( ಫೆ.21) ನಡೆಸಬೇಕಾಗಿದ್ದ ಬಂಟ್ವಾಳ ತಾಲೂಕು ಮಟ್ಟದ ಇಲಾಖೆಗಳ ಪ್ರಗತಿಪರಿಶೀಲನಾ ಸಭೆಯನ್ನು ದಿಢೀರ್ ರದ್ದುಗೊಳಿಸಿ ಬೆಂಗಳೂರಿಗೆ ಹಾರಿದ್ದು,ವ್ಯಾಪಕ ರಾಜಕೀಯ ಉಹಾಪೋಹಗಳಿಗೆ ಕಾರಣವಾಗಿದೆ. ಶುಕ್ರವಾರ ನಿಗದಿಯಾಗಿದ್ದ ಬಂಟ್ವಾಳ ತಾಲೂಕು ಮಟ್ಟದ ಇಲಾಖೆಯ ಪ್ರಗತಿಪರಿಶೀಲನೆಯನ್ನು ಸಚಿವ ಸೂಚನೆಯಂತೆ ಒಂದು ದಿನ ಮೊದಲೇ ಅಂದರೆ ಗುರುವಾರಕ್ಕೆ ನಿಗದಿಪಡಿಸಲಾಗಿತ್ರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಗತಿಪರಿಶೀಲನೆ ನಡೆಸಿ ,ಮಧ್ಯಾಹ್ನದ ಬಳಿಕ ಬಂಟ್ವಾಳತಾಪಂನ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಪ್ರಗತಿಪರಿಶೀಲನೆ ನಡೆಯಬೇಕಾಗಿತ್ತು. ಸಚಿವರು ಬೆಳಗ್ಗೆ ಬೆಳ್ತಂಗಡಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ್ದು, ಮಧ್ಯಾಹ್ನದ ಬಳಿಕ ನಡೆಸಬೇಕಾಗಿದ್ದ ಬಂಟ್ವಾಳ ತಾಲೂಕಿನ ಇಲಾಖೆಯ ಪ್ರಗತಿಪರಿಶೀಲನೆಯನ್ನು ಹಠಾತ್ತನೆ ರದ್ದುಗೊಳಿಸಿದ್ದಾರೆ.ತುರ್ತು ಬೆಂಗಳೂರಿಗೆ ತೆರಳಬೇಕಾದ ಕಾರಣ ಬಂಟ್ವಾಳದ ಪ್ರಗತಿಪರಿಶೀಲನೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.ಪ್ರಗತಿಪರಿಶೀಲನೆಯ ಹಿನ್ನಲೆಯಲ್ಲಿ ತಾಲೂಕಿನ ಎಲ್ಲಾ ಇಲಾಖಾಧಿಕಾರಿಗಳು ತಮ್ಮ ಇಲಾಖಾವಾರು ಪ್ರಗತಿಗೆ ಸಂಬಂಧಿಸಿ ಸಿದ್ದತೆಯನ್ನು ಮಾಡಿಕೊಂಡಿದ್ದರು.ಅಲ್ಲದೆ ಸಚಿವರ ಪಕ್ಷದ ಪ್ರಮುಖರು,ವಿವಿಧ ಸಮಸ್ಯೆಯನ್ಮು ಹೊತ್ತುಕೊಂಡು ಬಂದಿದ್ದ ಕೆಲ ಸಾರ್ವಜನಿಕರು ಸಚಿವರು ಅಹವಾಲು ಸ್ವೀಕಾರವನ್ನು ಹಠಾತ್ ರದ್ದುಗೊಳಿಸಿರುವುದರಿಂದ ಸಪ್ಪೆ ಮೊರೆ ಹಾಕಿ ವಾಪಾಸಾದರು. ತುರ್ತುಬುಲಾವ್ : ಮುಖ್ಯಮಂತ್ರಿಯವರ ತುರ್ತು ಬುಲಾವ್ ನ ಹಿನ್ನಲೆಯಲ್ಲಿ ಬೆಳ್ತಂಗಡಿಯಲ್ಲಿ ಪ್ರಗತಿ ಪರಿಶೀಲನೆ ಮುಗಿಸಿ ಸಚಿವ ಖಾದರ್ ಅವರು ಅಲ್ಲಿಂದಲೇ ನೇರ ಬೆಂಗಳೂರಿಗೆ ತೆರಳಿದ್ದಾರೆ ಎಂಬುದು ಅವರ ಆಪ್ತಮೂಲಗಳ ತಿಳಿಸಿವೆ. ಮುಂಬರುವ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಪಕ್ಷದ ಸಭೆಯಲ್ಲಿ ಭಾಗವಹಿಸಲು ಸಚಿವರು ಬೆಂಗಳೂರಿಗೆ ತೆರಳಿದ್ದಾರೆಂದು ತಿಳಿದು ಬಂದಿದೆ.