ಹೊರ ರಾಜ್ಯದ ಮನನೊಂದ ಮಹಿಳೆಯ ದುರಂತ ಕಥೆ..!! ಊರಿಗೆ ಕರೆದುಕೊಂಡು ಹೊಗಲು ಮಗ ಅಸಹಾಯಕ..! ನೆರವಿಗೆ ಬರುವಿರಾ..?
ಉಡುಪಿ,: ಅಪರಿಚಿತ ಮನನೊಂದ ಮಹಿಳೆಯೊರ್ವಳು ಅಸಹಾಯಕ ಸ್ಥಿತಿಯಲ್ಲಿ ಉಡುಪಿಯ ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾದ ಘಟನೆ ಕಳೆದ ವರ್ಷ ನಡೆದಿತ್ತು. ಆಕೆ ಮಾನಸಿಕ ಖಿನ್ನತೆಗೆ ಒಳಪಟ್ಟಂತೆ ಕಾಣುತ್ತಿದ್ದಳು. ಮಹಿಳೆ ತಾನು ಉಡುಪಿಯ ಪರಿಸರದ ಪ್ರಿಯಕರನನ್ನು ಹುಡುಕಿಕೊಂಡು ಬಂದಿರುವುದಾಗಿ ಹೇಳಿಕೊಂಡಿದ್ದಳು. ಆತ ನನ್ನ ಎರಡನೇ ಪತಿ, ಆತನೇ ನನ್ನ ಸರ್ವಸ್ವ, ಆತನ ವಿರುದ್ಧ ಯಾವುದೇ ದೂರು ನೀಡುವುದಿಲ್ಲ. ಆತನು ನನ್ನ ಇಂದಲ್ಲ ನಾಳೆ ಸೇರುತ್ತಾನೆ. ಅದುವರೆಗೆ ನನಗೆ ನೆಲೆ ಬೇಕೆಂದು ಹೇಳಿದ್ದಳು. ಆಕೆಯು ಬಿಹಾರ ರಾಜ್ಯ, ರಿಂಕು ಶರ್ಮ (35ವ) ಬ್ರಾಹ್ಮಣ ಸಮಾಜದವಳು, ಅಂದಷ್ಟೇ ಹೇಳಿಕೊಂಡಿದ್ದಳು. ಆಕೆಯ ಸ್ವಷ್ಟ ವಿಳಾಸ ಪತ್ತೆಯಾಗದ ಕಾರಣದಿಂದ ಮಹಿಳೆಯನ್ನು ರಕ್ಷಿಸಿ, ನಗರ ಮಹಿಳಾ ಠಾಣೆಯ ಉಪಸ್ಥಿತಿಯಲ್ಲಿ ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮ ಆಶ್ರಮದಲ್ಲಿ ನೆಲೆ ಕಲ್ಪಿಸಿ ಮಹಿಳೆಯನ್ನು ಬೀದಿ ಪಾಲಾಗುವ ಸ್ಥಿತಿಯಿಂದ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಪಾರುಮಾಡಿದ್ದರು.
ಕೆಲವು ದಿನಗಳ ಹಿಂದೆ ರಿಂಕು ಶರ್ಮ ಪ್ರಿಯಕರನ ನೆನಪಿಸುತ್ತ ಆಶ್ರಮದಲ್ಲಿ ನಿತ್ಯವು ರಂಪಾಟ ಗಲಾಟೆ ಮಾಡತೊಡಗಿದಳು. ಅಲ್ಲದೆ ರೋಧಿಸುತ್ತಿದ್ದಳು. ಆಶ್ರಮದ ಸಂಚಾಲಕರ ಮಾಹಿತಿಯ ಮೆರೆಗೆ ವಿಶು ಶೆಟ್ಟಿ ಅವರು ಮಹಿಳಾ ಠಾಣೆಯ ಎ.ಏಸ್.ಐ ಮುಕ್ತ ಅವರೊಂದಿಗೆ ಮಂಜೇಶ್ವರದ ಆಶ್ರಮಕ್ಕೆ ತೆರಳಿ ರಿಂಕು ಶರ್ಮಳನ್ನು ತಮ್ಮ ವಶಕ್ಕೆ ಪಡೆದು ಉಡುಪಿಗೆ ಕರೆ ತಂದಿದ್ದಾರೆ. ಆಕೆಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದಾಗ ಆಕೆ ನಿರಾಕರಿಸಿದ್ದಾಳೆ. ಆ ಬಳಿಕ ವಿಶು ಶೆಟ್ಟಿ ಅವರು ಆಕೆಯನ್ನು ಮಹಿಳಾ ವಸತಿ ಗ್ರಹದಲ್ಲಿ ದಾಖಲಿಸಿದ್ದಾರೆ. ಸೂಕ್ಷ್ಮವಾಗಿ ತನಿಖೆಗೆ ಒಳಪಡಿಸಿದಾಗ ಎ.ಎಸ್.ಐ ಮುಕ್ತ ಅವರಿಗೆ ಅವಳಿಂದ ಪಡೆದ ಮಾಹಿತಿ ಮೂಲಕ ಬಿಹಾರದಲ್ಲಿರುವ ಸಂಬಂಧಿಕರ ಸಂಪರ್ಕಿಸಿದ್ದಾರೆ. ಆ ಬಳಿಕ ಆಕೆಯ 18 ವರ್ಷದ ಮಗ ವಿಷಯ ತಿಳಿದು ಉಡುಪಿಗೆ ಬಂದಿದ್ದಾನೆ. ಆ ಬಳಿಕ ರಿಂಕು ಶರ್ಮಳನ್ನು ಚಿಕಿತ್ಸೆಗಾಗಿ ದೊಡ್ಡನಗುಡ್ಡೆ ಡಾ.ಎ.ವಿ ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಲಾಯಿತು.
ಈಗ ಮಹಿಳೆ ಗುಣಮುಖಳಾಗಲು ಸುಮಾರು 6 ತಿಂಗಳುಗಳ ಸಮಯದ ಚಿಕಿತ್ಸೆ ಬೇಕಾಗಿದೆ ಎಂದು ತಿಳಿದು ಬಂದಿದೆ. ಅಲ್ಲಿಯ ವರೆಗೆ ಆಕೆಯ ಮಗ ವಿದ್ಯಾರ್ಥಿಯಾದ ಕಾರಣದಿಂದ ಆಸ್ಪತ್ರೆಯಲ್ಲಿರಲು ಅಸಹಾಯಕನಾಗಿದ್ದಾನೆ. ತಾಯಿಯನ್ನು ಚಿಕಿತ್ಸೆಗಾಗಿ ಬಿಹಾರಕ್ಕೆ ಕರೆದುಕೊಂಡು ಹೋಗಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ನೆರವು ಯಾಚಿಸಿದ್ದಾನೆ. ತಾಯಿಯನ್ನು ರೈಲಿನಲ್ಲಿ ಕರೆದುಕೊಂಡು ಹೋಗಲು ನಾಲ್ಕು ದಿನಗಳು ತಗಲುತ್ತದೆ. ನಾಲ್ಕು ದಿನ ಮನೋರೋಗಿ ತಾಯಿಯನ್ನು ಮಗನಿಗೆ ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿದೆ. ಹಾಗಾಗಿ ವಿಮಾನಯಾನ ಮಾಡಬೇಕಾಗುತ್ತದೆ.
ವಿಮಾನ ಪ್ರಯಾಣದ ಮೂಲಕ ಊರಿಗೆ ಹೋಗ ಬೇಕಾದರೆ ಸುಮಾರು 35 ಸಾವಿರ ರೂ ಇರ್ವರಿಗೆ ಟಿಕೇಟು ವೆಚ್ಚ ತಗಲುತ್ತದೆ. ಅಷ್ಟೊಂದು ಹಣವನ್ನು ವಿದ್ಯಾರ್ಥಿಯಾದ ಮಗನಲ್ಲಿ ಭರಿಸಲು ಅಸಾದ್ಯವಾಗಿದೆ. ಇಕೆಯ ಬಗ್ಗೆ ಮಾಹಿತಿ ಉಳ್ಳವರು, ಹಾಗೂ ದಾನಿಗಳು, ಸಂಘ ಸಂಸ್ಥೆಗಳು ತಾಯ್ನಾಡಿಗೆ ಬಿಡಲು ಸಹಕರಿಸುವಂತೆ ವಿಶು ಶೆಟ್ಟಿ ಅವರು ವಿನಂತಿಸಿದ್ದಾರೆ. ನೊಂದ ತಾಯಿಯು ನೀಡುತ್ತಿರುವ ಹೇಳಿಕೆಯ ಆಧಾರದ ಮೇಲೆ, ತಾಯಿ ಮನನೊಂದಲು ಕಾರಣರಾದವರ ವಿರುದ್ಧ ದೂರು ನೀಡುವುದಾಗಿ ಮಗ ಹೇಳಿಕೊಂಡಿದ್ದಾನೆ.