ಬ್ಯಾಂಕ್ ಹೆಸರು ಬದಲಾವಣೆ ಸಲ್ಲದು’
ಕೈಕಂಬ: ದಕ್ಷಿಣ ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡ ಬ್ಯಾಂಕಿಗೆ ವಿಲೀನಗೊಳಿಸುವ ಮೂಲಕ ಕನ್ನಡದ ಹೆಮ್ಮೆಯ ಬ್ಯಾಂಕನ್ನು ಕೇಂದ್ರ ಸರಕಾರ ನಾಶ ಮಾಡಲು ಹೊರಟಿದೆ. ಯಾವುದೇ ಕಾರಣಕ್ಕೂ ಬ್ಯಾಂಕ್ ಹೆಸರು ಬದಲಾವಣೆ ಸಲ್ಲದು ಎಂದು ಕಾಂಗ್ರೆಸ್ ಮುಖಂಡ ನೀಲಯ್ಯ ಎಂ. ಅಗರಿ ಆರೋಪಿಸಿದ್ದಾರೆ. ಕುಪ್ಪೆಪದವು ವಲಯ ಕಾಂಗ್ರೆಸ್ ವತಿಯಿಂದ ಕುಪ್ಪೆಪದವು ವಿಜಯ ಬ್ಯಾಂಕ್ ಶಾಖೆಯ ಎದುರು ಗುರುವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಗ್ರಾ.ಪಂ. ಸದಸ್ಯ ಬಿ.ಎ. ಅಬೂಬಕ್ಕರ್ ಮಾತನಾಡಿ, ಎ.ಬಿ. ಶೆಟ್ಟಿಯವರಿಂದ ಸ್ಥಾಪಿಸಲ್ಪಟ್ಟ ನಮ್ಮ ಹೆಮ್ಮೆಯ ವಿಜಯ ಬ್ಯಾಂಕನ್ನು ಯಾವುದೇ ಕಾರಣಕ್ಕೂ ಬೇರೆ ಬ್ಯಾಂಕ್ ಜೊತೆಗೆ ವಿಲೀನಗೊಳಿಸುವದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದರು.
ವಲಯ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಸಾಲ್ಯಾನ್ ತಾಳಿಪಾಡಿ, ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಮುಖಂಡರುಗಳಾದ ಚಂದ್ರಹಾಸ ಶೆಟ್ಟಿ ಮುತ್ತೂರು, ಉದಯ ಕುಮಾರ್, ಹಿರಣಾಕ್ಷ ಕೋಟ್ಯಾನ್, ಅಜಿತ್ ಕುಮಾರ್ ಜೈನ್, ಐ.ಕೆ. ಹಸನ್ ಕುಳವೂರು, ನಾಬರ್ಟ್ ಮಥಾಯಸ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.