ವಾಮಂಜೂರು ವಿದ್ಯಾಜ್ಯೋತಿ ಶಾಲೆಯಲ್ಲಿ ಕ್ರಿಸ್ಮಸ್ ಸಂಭ್ರಮ
ಕೇಕ್ ಕತ್ತರಿಸುವುದಲ್ಲ ; ಮಾನವನಾಗುವುದು ಕ್ರಿಸ್ಮಸ್ : ಫಾ. ರಾಯನ್ ಪಿಂಟೋ
ಬಜ್ಪೆ : ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶುಕ್ರವಾರ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಪುಣಾಣಿಗಳ ಸಹಿತ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಹಾಗೂ ಸರ್ವಧರ್ಮ ಸಮಭಾವದ ಸಮಾರಂಭ ನಡೆಯಿತು.
ಮಕ್ಕಳು ನಡೆಸಿಕೊಟ್ಟ ದೇವದೂತ ಏಸುಕ್ರಿಸ್ತನು ತನ್ನ ಜೀವಿತಾವಧಿಯಲ್ಲಿ ನಡೆಸಿದ ಮನಮಿಡಿಯುವ ಪವಾಡ ಸನ್ನಿವೇಶ ಒಳಗೊಂಡ ನೃತ್ಯರೂಪಕ ಸ್ವಾಗತದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಜೊತೆಗೆ ಪುಟಾಣಿಗಳ ಮನಮೋಹಕ ನೃತ್ಯವೊಂದು ಪ್ರದರ್ಶನಗೊಂಡಿತು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಿಕರ್ಣಕಟ್ಟೆ ಬಾಲಯೇಸು ಚರ್ಚಿನ ಒಕೇಶನ್ ಪ್ರೊಮೋಶನ್ ನಿರ್ದೇಶಕ ಫಾ. ರಾಯನ್ ಪಿಂಟೋ ಮಾತನಾಡುತ್ತ, ಕ್ರಿಸ್ಮಸ್ ಎಂದರೆ ಬರೇ ಕೇಕ್ ಕತ್ತರಿಸುವುದು, ಬಲೂನ್ ಒಡೆಯುವುದು, ಸಿಹಿ ಹಂಚುವುದಲ್ಲ. ಯಾವ ವ್ಯಕ್ತಿ ಮಾನವನಾಗುತ್ತಾನೋ ಆಗ ಕ್ರಿಸ್ಮಸ್ ಪದಕ್ಕೆ ನಿಜವಾದ ಅರ್ಥ ಬರುತ್ತದೆ. ಇತರರನ್ನು ಪ್ರೀತಿಸುವುದರ ಜೊತೆಗೆ ಗೌರವಿಸುವುದು ಮಾನವ ಧರ್ಮವಾಗುತ್ತದೆ. ಇದೇ ಏಸು ಈ ಜಗತ್ತಿಗೆ ನೀಡಿದ ಸಂದೇಶವಾಗಿದೆ ಎಂದರು.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್-ಕಾನ್ಸ್ಟೇಬಲ್ ಮೋಹನ್, ಅಬ್ದುಲ್ ಹಮೀದ್ ಫೈಜಿ ಮಾತನಾಡಿದರು. ಸಮಾರಂಭದಲ್ಲಿ ಆಸ್ಟ್ರೀಯಾ ಜನರಲ್ ಕಾನ್ಫರೆನ್ಸಿಗೆ ತೆರಳಲಿರುವ ಸಿಸ್ಟರ್ ಝೀನಾ ಡಿ’ಸೋಜ ಹಾಗೂ ಪಿಟಿಎ ಮಾಜಿ ಅಧ್ಯಕ್ಷ ರೋಶನ್ ಕಾಮತ್ರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಿಸ್ಟರ್ ಜೋಯೆಲ್ ಲಾಸ್ರಾದೋ, ಸಿಸ್ಟರ್ ರೀಮಾ ಕ್ರಾಸ್ತಾ, ಪೊಲೀಸ್ ಅಧಿಕಾರಿಗಳಾದ ಕುಮಾರೇಶ್, ಹರೀಶ್ ಹಾಗೂ ಪಿಟಿಎ ಅಧ್ಯಕ್ಷ ಪೌಲ್ ಫೆರ್ನಾಂಡಿಸ್ ಇದ್ದರು. ಶಾಲಾ ಮಕ್ಕಳು ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ ಸಿಕ್ವೇರ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನ್ಸಿಲ್ಲಾ ಡಿ’ಮೆಲ್ಲೋ ವಂದಿಸಿದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.